ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಚಿನ್ನಾಭರಣಗಳನ್ನು ಖದೀಮರು ದೋಚಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜು.28 ರಂದು ಕೆಂಗೇರಿಯ ಸುಭಾಷ್ ನಗರದಲ್ಲಿರುವ ಸಹೋದರಿ ಮನೆಗೆ ಹಲಸೂರು ನಿವಾಸಿ ಸರೋಜಮ್ಮ ಎಂಬುವವರು ಹೋಗಿದ್ದರು. ಅದೇ ದಿನ ಸಂಜೆ ಮನೆಗೆ ವಾಪಸ್ ಹೋಗಲು ಕೆಂಗೇರಿ ಬಸ್ ಸ್ಟಾಪ್ ಬಳಿ ಬಂದಿದ್ದರು.
ಈ ವೇಳೆ, ಕಾರಿನಲ್ಲಿ ಬಂದಿದ್ದ ಮೂವರು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾರೆ. ತಾನು ಸಿಟಿ ಮಾರ್ಕೆಟ್ಗೆ ಹೋಗಬೇಕು ಎಂದಿದ್ದಾರೆ ಸರೋಜಮ್ಮ, ನಾವು ಅದೇ ಮಾರ್ಗವಾಗಿ ಹೋಗುತ್ತಿದ್ದೇವೆ. ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡು ಕೊಮ್ಮಘಟ್ಟ ರಸ್ತೆ ಮಾರ್ಗದಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿದ್ದ ಇಬ್ಬರು ಯುವಕರು ಮುಂದೆ ಕಳ್ಳರಿರುತ್ತಾರೆ. ಮೈಮೇಲೆ ಚಿನ್ನದ ಒಡವೆಗಳಿದ್ದರೆ ಬೆದರಿಸಿ ದೋಚುತ್ತಾರೆ ಎಂದು ಹೆದರಿಸಿದ್ದಾರೆ.
ಅವರ ಮಾತನ್ನು ನಂಬಿದ ಮಹಿಳೆ ತಮ್ಮ ಬಳಿಯಿದ್ದ 2 ಚಿನ್ನದ ಉಂಗುರ, ಸರ, ಕಿವಿಯೋಲೆ ಸೇರಿ 5 ಸಾವಿರ ಹಣವನ್ನು ಆರೋಪಿಗಳ ಕೈಗೆ ಕೊಟ್ಟಿದ್ದಾರೆ. ಇದನ್ನೆಲ್ಲ ಪಡೆದ ಆರೋಪಿಗಳು ಆಕೆಯನ್ನು ಕೆಂಗೇರಿ ಬಳಿಯ ಸುರಾನಾ ಕಾಲೇಜು ಬಳಿ ಇಳಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.