ಬೆಂಗಳೂರು : ಸಾರಿಗೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಒಟ್ಟು 30 ಆನ್ಲೈನ್ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಆರ್ಟಿಒ ಮತ್ತು ಎಆರ್ಟಿಒ ಕಚೇರಿಗಳನ್ನು ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಯಲ್ಲಿ ಇಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ವೇಳೆ ಸೋಮನಗೌಡ ಬಿ.ಪಾಟೀಲ್ ಅವರ ಪರವಾಗಿ ಶಿವರಾಜ್ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಾಲನಾ ಪರವಾನಿಗೆ, ವಾಹನಗಳ ನೋಂದಣಿ ಸೇರಿದಂತೆ 30 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುತ್ತಿದ್ದೇವೆ. ಆದಾಗ್ಯೂ ಆರ್ಟಿಒ, ಎಆರ್ಟಿಒ ಕಚೇರಿಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದರು.
ಯಾವುದೇ ಭಾಗದಲ್ಲಿ ಆರ್ಟಿಒ ಮತ್ತು ಎಆರ್ಟಿಒ ಕಚೇರಿ ತೆರೆಯಬೇಕಾದರೆ, ಕೆಲವೊಂದು ಮಾನದಂಡಗಳು ಇರಬೇಕು, ಜನಸಂಖ್ಯೆ, ದೈನಂದಿನ ವಹಿವಾಟು ಇವೆಲ್ಲವನ್ನೂ ನೋಡಿಕೊಂಡು ನಾವು ಅಗತ್ಯವಿದ್ದರೆ ಆರ್ಟಿಒ ಮತ್ತು ಎಆರ್ಟಿಒ ಕಚೇರಿಗಳನ್ನು ತೆರೆಯುತ್ತೇವೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ನೂತನವಾಗಿ ರಚನೆಯಾದ ದೇವರಹಿಪ್ಪರಗಿ ತಾಲೂಕಿನಲ್ಲಿ ಉಪಸಾರಿಗೆ ಅಧಿಕಾರಿಗಳ ಕಚೇರಿಯನ್ನು ತೆರೆಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಪ್ರತಿ ತಿಂಗಳ ಮೊದಲ ವಾರದಲ್ಲಿ ಜಾಗೃತಿ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಆಗ ಆರ್ಟಿಒ ಕಚೇರಿಯಿಂದ ಆಗಬೇಕಾದ ಎಲ್ಲ ಸೇವೆಗಳು ಎಆರ್ಟಿಒದಲ್ಲಿ ಲಭ್ಯವಾಗಲಿವೆ ಎಂದರು.
ಈ ಹಂತದಲ್ಲಿ ಶಾಸಕ ಶಿವಾನಂದ ಪಾಟೀಲ್ ಮತ್ತು ಎ.ಎಸ್.ನಡಹಳ್ಳಿ ಮಧ್ಯಪ್ರವೇಶಿಸಿದರು. ಈ ಹಿಂದೆ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ್ ಸವದಿ ಅವರು ದೇವರಹಿಪ್ಪರಗಿಯಲ್ಲಿ ಎಆರ್ಟಿಒ ಕಚೇರಿ ಸ್ಥಾಪನೆ ಮಾಡುವುದಾಗಿ ಸದನ ಹಾಗೂ ಕ್ಷೇತ್ರದಲ್ಲಿ ಘೋಷಣೆ ಮಾಡಿದ್ದಾರೆ.
ಈಗ ಸಚಿವರು ನಮ್ಮ ಮುಂದೆ ಪ್ರಸ್ತಾವನೆ ಇಲ್ಲ ಎಂದರೆ, ಹಿಂದೆ ನೀಡಿದ ಹೇಳಿಕೆಗೆ ಬೆಲೆ ಇಲ್ಲವೇ? ಇದು ಅತ್ಯಗತ್ಯ ಕ್ರಮವಾಗಿದ್ದು, ನಮಗೆ ಎಆರ್ ಟಿಒ ಕಚೇರಿಯನ್ನು ಮಂಜೂರು ಮಾಡಿಕೊಡಿ ಎಂದು ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ರಬಕವಿ ಮತ್ತು ಬನಹಟ್ಟಿ ಪಟ್ಟಣಗಳಲ್ಲಿ ಪ್ರಸ್ತಕ ವರ್ಷ ತಲಾ 75 ಲಕ್ಷ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಶಾಸಕ ಸಿದ್ದು ಸವದಿ ಪ್ರಶ್ನೆಗೆ ಉತ್ತರಿಸಿದ ಅವರು, 2022-23ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ರಬಕವಿ ಮತ್ತು ಬನಹಟ್ಟಿ ಪಟ್ಟಣಗಳಲ್ಲಿ ತಲಾ 75 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಮಂಜೂರು ಮಾಡಲಾಗಿದೆ.
ಬಸ್ನಿಲ್ದಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಹೊರಗುತ್ತಿಗೆ ಮೇಲೆ ನೌಕರರನ್ನು ನೇಮಿಸಿಕೊಂಡು ಸ್ವಚ್ಛತೆ ಕಾಪಾಡಲಾಗುವುದು ಎಂದರು.