ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಿರುವುದು ರಂಗಭೂಮಿಗೆ ಸಂದ ಗೌರವವಾಗಿದೆ. ಕಲಾಕ್ಷೇತ್ರದಲ್ಲಿ ಸಿಜಿಕೆ ಅವರ ಕೊಡುಗೆ ಅಪಾರವಾಗಿದೆ. ರಂಗಭೂಮಿಗೆ ಹೊಸ ಆಯಾಮ ನೀಡಿ ಹೊಸ ತಲೆಮಾರಿನ ರಂಗ ತಂತ್ರಜ್ಞರು, ನಿರ್ದೇಶಕರು, ನಟರಿಗೆ ದಾರಿ ದೀಪವಾಗಿದ್ದರು. ಶಶಿಧರ ಹಡಪರಂತಹ ರಂಗತಂತ್ರಜ್ಞರ ಉಗಮಕ್ಕೆ ಭೂಮಿಕೆ ಒದಗಿಸಿದರು. ರಂಗಭೂಮಿಯ ಅನೇಕರು ಸಿಜಿಕೆ ಅವರಿಂದ ಪ್ರಭಾವಿತರಾಗಿದ್ದಾರೆ. ಸಿ.ಜಿ.ಕೃಷ್ಣಮೂರ್ತಿ ರಂಗಭೂಮಿ ಮಾತ್ರವಲ್ಲದೇ ಮಾನವೀಯ ಪ್ರಜ್ಞೆ ಉಳ್ಳವರಾಗಿದ್ದರು. ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರ ಬಳಿ ಹೋಗಿ ಅವರ ಕಷ್ಟ ಸುಖಗಳನ್ನು ಆಲಿಸಿ ಅವರ ನೋವುಗಳಿಗೆ ಹೆಗಲು ಕೊಡುತ್ತಿದ್ದರು ಎಂದರು.
![postage envelope released](https://etvbharatimages.akamaized.net/etvbharat/prod-images/10208380_thumbna.jpg)
ನಂತರ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಮಾತನಾಡಿ, ಇಷ್ಟು ದಿನ ಗಿರೀಶ್ ಕಾರ್ನಾಡ್ ರಂತಹ ರಂಗ ನಟರ ಅಂಚೆ ಚೀಟಿಗಳು ಬಂದಿವೆ. ಆದರೆ, ರಂಗ ನಿರ್ದೇಶಕರೊಬ್ಬರ ಹೆಸರಿನಲ್ಲಿ ಅಂಚೆ ಚೀಟಿ ಹೊರ ತಂದಿರುವುದು ಸಂತಸವಾಗಿದೆ. ರಂಗಭೂಮಿಗೆ ಸೇವೆ ಸಲ್ಲಿಸಿದ ಸಿಜಿಕೆ ಅವರ ಕಾರ್ಯಗಳು ಇಂದಿನ ರಂಗಕರ್ಮಿಗಳಿಗೆ ಮಾರ್ಗದರ್ಶಕ. ಅಂಚೆ ಚೀಟಿಗಳಲ್ಲಿ ಇಂತಹ ಮಹನೀಯರು ಬಂದರೆ ಮುಂದಿನ ತಲೆಮಾರುಗಳಿಗೆ ಸಿಜಿಕೆ ಚಿರಸ್ಥಾಯಿಯಾಗಿ ಸ್ಮೃತಿಯಲ್ಲಿರುತ್ತಾರೆ. ಇನ್ನು ಮುಂದೆ ರಂಗ ಕಲಾವಿದರು, ರಂಗ ತಂತ್ರಜ್ಞರು, ರಂಗ ನಿರ್ದೇಶಕರನ್ನು ಗುರುತಿಸಿ ಅವರಿಗೆ ಅಂಚೆ ಚೀಟಿಯ ಗೌರವ ನೀಡಲಾಗುವುದು ಎಂದು ಹೇಳಿದರು.
![postage envelope released](https://etvbharatimages.akamaized.net/etvbharat/prod-images/10208380_thum.jpg)
ಈ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ವಿಶೇಷ ಅಥಿತಿ ಹಾಗೂ ರಂಗ ಕರ್ಮಿ ಸಿ. ಜಿ. ಕೃಷ್ಣಮೂರ್ತಿ, ನಟ ಅರುಣ್ ಸಾಗರ್, ರಾಜ್ಯಸಭಾ ಸದ್ಯ ಕೆ.ಸಿ.ರಾಮಮೂರ್ತಿ, ಹಿರಿಯ ರಂಗ ಸಂಘಟಕ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.