ಯತಿರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೌಟುಂಬಿಕ ಕಥೆ ಆಧಾರಿತ ಚಿತ್ರ ಸೀತಮ್ಮನ ಮಗ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಬೆಳ್ಳೆ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ಇಗಾಗಲೇ ಸ್ಯಾಂಡಲ್ವುಡ್ನಲ್ಲಿ ಧಾರಾವಾಹಿ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿರುವ ಯತಿರಾಜ್, ಇದೀಗ ನಟನೆ ಜೊತೆಗೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಮಿಂಚಲಿದ್ದಾರೆ.
ಸೀತಮ್ಮನ ಮಗ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ಯತಿರಾಜ್, ನಾನು ಈ ಹಿಂದೆ ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಒಂದು ಕಥೆ ಸಿದ್ಧ ಮಾಡಿಕೊಂಡಿದ್ದೆ. ಆ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಅವರು ಒಪ್ಪಿದ್ದರು. ಆದರೇ ಕಾರಣಾಂತರದಿಂದ ಅದು ಆಗಲಿಲ್ಲ. ಇತ್ತೀಚೆಗೆ ಸ್ನೇಹಿತನ ಅಂತ್ಯಕ್ರಿಯೆಗಾಗಿ ಹರಿಶ್ಚಂದ್ರ ಘಾಟ್ ಗೆ ಹೋಗಿದ್ದಾಗ ಒಂದು ಕಥೆ ಹುಟ್ಟಿತು. ಅದೇ ಕಥೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರದಲ್ಲಿ ತಾಯಿ-ಮಗನ ಬಾಂಧವ್ಯವೇ ಹೈಲೆಟ್ ಎಂದು ಯತಿರಾಜ್ ಹೇಳಿದ್ದಾರೆ.
ಅಲ್ಲದೇ ಸೀತಮ್ಮನ ಮಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಅವರಿಗೆ ಯತಿರಾಜ್ ಧನ್ಯವಾದ ತಿಳಿಸಿದರು. ಸದ್ಯ ಯೂಟ್ಯೂಬ್ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಬೆಳ್ಳೆ ತೆರೆಗೆ ಚಿತ್ರ ಬರಲಿದೆ ಎಂದು ಚಿತ್ರತಂಡ ಇದೇ ವೇಳೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಗೋಲ್ಡನ್ ಸಾರಿಯಲ್ಲಿ ಮಿರಿ ಮಿರಿ ಮಿಂಚುತ್ತಿರುವ ಚೆಲುವೆ