ಬೆಂಗಳೂರು: ಮೆಜೆಸ್ಟಿಕ್ನಲ್ಲಿ ಅಂಧ ದಂಪತಿಯ ಮಗುವಿನ ಕಿಡ್ನಾಪ್ ಪ್ರಕರಣ ಪೊಲೀಸರ ಸಹಕಾರದಿಂದ ಸುಖಾಂತ್ಯ ಕಂಡಿದೆ.
ಮೆಜೆಸ್ಟಿಕ್ನಲ್ಲಿ ರಾಯಚೂರು ಮೂಲದ ಬಸವಾರಾಜ್ ಹಾಗೂ ಚಿನ್ನು ಎಂಬ ಅಂಧ ದಂಪತಿಯ ಮಗುವನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು.
ಈ ಸಂಬಂಧ ಡಿಸಿಪಿ ರವಿ ಡಿ ಚೆನ್ನಣ್ಣನವರ ಮಾತನಾಡಿ, ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೆವು. ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ತಂಡ ರಚನೆ ಮಾಡಿದ್ದೆವು. ಆದ್ರೆ, ನಿನ್ನೆ ಮಹಿಳೆವೋರ್ವಳು ಠಾಣೆಗೆ ಹಾಜರಾಗಿ, ನನ್ನ ತಂಗಿ ಪಾರ್ವತಮ್ಮಗೆ ಈ ಮಗು ಸಿಕ್ಕಿದ್ದು, ಮಗು ತಮ್ಮ ಬಳಿ ಇದೆ ಎಂದು ತಿಳಿಸಿದ್ದರು.
ಆ ಮಹಿಳೆಯ ತಂಗಿ ಶೌಚಾಲಯಕ್ಕೆ ಹೋಗುವಾಗ ಅವರ ಕೈಗೆ ಇನ್ನೋರ್ವ ಮಹಿಳೆ ಮಗುವನ್ನು ಕೊಟ್ಟಿದ್ದರಂತೆ. ನಂತರ ಪತ್ರಿಕೆಯಲ್ಲಿ ಪ್ರಕಟವಾದ್ದದ್ದನ್ನು ನೋಡಿ ಮಹಿಳೆ ಪೊಲೀಸರಿಗೆ ಮಗು ಒಪ್ಪಿಸಿದ್ದಾರೆ. ಆ ಮಹಿಳೆಯ ಕಾರ್ಯಕ್ಕೆ ಚೆನ್ನಣ್ಣನವರ ಶ್ಲಾಘನೆ ವ್ಯಕ್ತಪಡಿಸಿದರು. ಆದ್ರೆ ಅನುಮಾನದ ಹಿನ್ನೆಲೆ ತನಿಖೆ ಕೂಡ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.