ಆನೇಕಲ್: ವಲಸಿಗರನ್ನು ಕ್ವಾರಂಟೈನ್ ಮಾಡಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ತೆಲಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನಿಂದ, ಹೊರರಾಜ್ಯಗಳಿಂದ ಮರಳಿದ್ದ 158 ಜನರನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳ ತಂಡ ಕರೆ ತಂದಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಊರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಅಡ್ಡಲಾಗಿ ಮರದ ದಿಮ್ಮೆಗಳನ್ನು ಒಡ್ಡಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟಿಸಿದರು. ಕ್ವಾರಂಟೈನ್ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಹಾಗೂ ಪೊಲೀಸರು ಗ್ರಾಮದ ಜನರ ಮನವೊಲಿಸಲು ಯತ್ನಿಸಿದರು. ಈ ವೇಳೆ ಕೆಲಕಾಲ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆನೇಕಲ್ ತಾಲೂಕಿನಲ್ಲಿ ಯಾವುದೇ ಪಾಸಿಟಿವ್ ಕೇಸ್ ಗಳಿಲ್ಲದೆ ಜನ ನಿಶ್ಚಿಂತೆಯಿಂದ ಇದ್ದಾರೆ. ಹೀಗಾಗಿ ಅವರನ್ನು ಇಲ್ಲಿ ಕ್ವಾರಂಟೈನ್ ಮಾಡುವುದು ಬೇಡ. ಬೇರೆಡೆಗೆ ಶಿಫ್ಟ್ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಇನ್ನೊಂದೆಡೆ ಜನರ ಈ ವಿರೋಧದಿಂದಾಗಿ, ಕ್ವಾರಂಟೈನ್ಗೆ ಒಪ್ಪಿ ಬಸ್ ಮೂಲಕ ಬಂದಿದ್ದ ಜನರು ಗಂಟೆ ಗಟ್ಟಲೆ ಊಟ, ನೀರು ಇಲ್ಲದೆ ತೊಂದರೆ ಪಡಬೇಕಾಯಿತು. ಅಧಿಕಾರಿಗಳು ಬಸ್ ಮೂಲಕ ಕರೆತಂದು ಬೆಳಿಗ್ಗೆಯಿಂದ ಕುಡಿಯಲು ನೀರನ್ನು ಸಹ ವ್ಯವಸ್ಥೆ ಮಾಡಿಲ್ಲ. ಬಸ್ ನಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ಇದ್ದಾರೆ. ನಮ್ಮನ್ನು ಮನೆಗಾದರು ಕಳುಹಿಸಿ ಕೊಡಿ. ಇಲ್ಲವೇ ಸೂಕ್ತ ವ್ಯವಸ್ಥೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಒಪ್ಪಿಕೊಂಡಿದ್ದು, ಕ್ವಾರಂಟೈನ್ ಗೆ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.