ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದ ರಾಜ್ಯ ಸರ್ಕಾರಕ್ಕೆ ಐಪಿಎಸ್ ಅಧಿಕಾರಿ ಎಡಿಜಿಪಿ ಮುರುಗನ್ ವರದಿ ನೀಡಿದ್ದಾರೆ.
ಜೈಲಿನಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಜೈಲು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಜೈಲಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ದಂಧೆ, ಸೆರೆಮನೆಯಲ್ಲಿ ಇದ್ದುಕೊಂಡೇ ಪರೋಕ್ಷವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿ, ಐಷಾರಾಮಿ ಸೌಲಭ್ಯ ಕಲ್ಪಿಸಲು ಸಿಬ್ಬಂದಿಗೆ ಲಂಚದ ಬಗ್ಗೆ ಕಳೆದ ಜನವರಿಯಲ್ಲಿ ಮಾಧ್ಯಮಗಳಲ್ಲಿ ವಿಡಿಯೋ ಬಿತ್ತರವಾಗಿತ್ತು. ಇದು ಸರ್ಕಾರದ ಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಐಪಿಎಸ್ ಅಧಿಕಾರಿ ಮುರುಗನ್ ಅವರಿಗೆ ಸರ್ಕಾರ ಸೂಚಿಸಿತ್ತು. ಇದರಂತೆ ತನಿಖೆ ಕೈಗೊಂಡ ಮುರುಗನ್ ನೇತೃತ್ವದ ತನಿಖಾ ತಂಡ ಜೈಲಿಗೆ ಖುದ್ದು ತೆರಳಿ ಸಾಕ್ಷಿಗಳ ವಿಚಾರಣೆ ನಡೆಸಿ ಕಾರಾಗೃಹ ಇಲಾಖೆಯ ಮುಖ್ಯಸ್ಥ ಅಲೋಕ್ ಮೋಹನ್ ಮೂಲಕ ಸುಮಾರು 500 ಪುಟಗಳ ತನಿಖಾ ವರದಿ ನೀಡಿದೆ.
ತನಿಖಾ ವರದಿಯಲ್ಲಿ ಏನಿದೆ? ಜೈಲಿನಲ್ಲಿ ಅವ್ಯಾಹತವಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಅಕ್ರಮದ ಹಿಂದೆ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡವಿದೆ. ಸೆರೆಮನೆಗೆ ಸುಲಭವಾಗಿ ಮೊಬೈಲ್, ಮಾದಕವಸ್ತು ಅಡೆತಡೆಯಿಲ್ಲದೆ ಬರುತ್ತಿದೆ. ಇದರಿಂದ ಸಿಬ್ಬಂದಿ ಕೈಚಳಕ ಜೊತೆಗೆ ಭದ್ರತಾ ಲೋಪವಿದೆ. ಮೊಬೈಲ್ ಬಳಕೆಯಿಂದ ಪರೋಕ್ಷವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಕ್ರಮದಲ್ಲಿ ಜೈಲಿನ ಸಿಬ್ಬಂದಿ ಜೊತೆ ಕೈದಿ ಸೇರಿ 10ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
ಅಕ್ರಮಗಳ ಬಗ್ಗೆ ಜೈಲಿನಲ್ಲಿ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆಯೂ ತನಿಖಾ ತಂಡ ವರದಿ ಸಲಹೆ ನೀಡಿದೆ. ಆಡಳಿತಾತ್ಮಕವಾಗಿ ಬದಲಾವಣೆ ಮಾಡುವಂತೆಯೂ ಹೇಳಿದೆ. ತಪ್ಪಿತಸ್ಥರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದ್ದು, ಬಹಳ ವರ್ಷಗಳಿಂದ ಠಿಕಾಣಿ ಹೂಡಿದ್ದ ಸಿಬ್ಬಂದಿ ವರ್ಗಾವಣೆ ಮಾಡಬೇಕು.
ಭದ್ರತಾ ವ್ಯವಸ್ಥೆಯಲ್ಲಿ ಇನ್ನಷ್ಟು ಬಲಗೊಳಿಸಬೇಕು. ಜೈಲಿನಲ್ಲಿ ಭಯದ ವಾತಾವರಣವಿದ್ದು ಇದನ್ನು ಹೋಗಲಾಡಿಸುವ ಕೆಲಸವಾಗಬೇಕಿದೆ ಎಂಬುದರ ಸೇರಿದಂತೆ ಹಲವು ಅಂಶಗಳ ಬಗ್ಗೆ ಸುಧಾರಣಾತ್ಮಕ ಅಂಶಗಳ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: 'ನೌಟಂಕಿ' ಕಂಪನಿಗೆ 'ತಮಾಶಾ' ಗ್ಯಾರಂಟಿ: ₹141 ಕೋಟಿ ಸಾಲ ಕೊಟ್ಟು ಬ್ಯಾಂಕುಗಳಿಗೆ ಫಜೀತಿ!