ಬೆಂಗಳೂರು: ಮಹದೇವಪುರ ಕ್ಷೇತ್ರದ ವಿರೇನಹಳ್ಳಿಯಲ್ಲಿ ಎನ್ಎಸ್ಪಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ದಾಯಾದಿಗಳ ಆಸ್ತಿ ಜಗಳದಿಂದ ಸುಮಾರು 60 ನೌಕರರು ಬೀದಿಗೆ ಬಂದ ಘಟನೆ ನಡೆದಿದೆ.
ಕಳೆದ ಒಂದು ವರ್ಷದಿಂದ ಲಾಕ್ಡೌನ್ ಸಮಯದಲ್ಲೂ ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡದೇ ಈಗ ಜನವರಿ 13ರಂದು ಸಂಜೆ ರಾತ್ರೋರಾತ್ರಿ ಕಂಪನಿಯನ್ನು ಮುಚ್ಚಾಲಾಗಿದೆ ಎಂದು ನೋಟಿಸ್ ಅಂಟಿಸಿ ಕಂಪನಿಯ ಮುಂದೆ ಬೌನ್ಸರ್ಗಳನ್ನು ನೇಮಿಸಲಾಗಿದೆ. ಕಂಪನಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾರ್ಮಿಕ ಅಶ್ವಥ್ ನಾರಾಯಣ ಗೌಡ ಮಾತನಾಡಿ, ಕಾರ್ಮಿಕರಿಗೆ ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ಕಂಪನಿಯನ್ನು ಮುಚ್ಚಿದ್ದಾರೆ. ಕಾರ್ಮಿಕರಿಗೆ ಇಎಸ್ಐ ಹಾಗೂ ಪಿಎಫ್ ಹಣ ನೀಡುತ್ತಿಲ್ಲ. ಕಳೆದ ಆರೇಳು ತಿಂಗಳಿಂದ ಅರ್ಧ ಸಂಬಳವನ್ನು ನೀಡಿ ಏಕಾಏಕಿ ಕಂಪನಿ ಮುಚ್ಚಿದರೆ ನಮ್ಮ ಗತಿಯೇನು. ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕ ಕಟ್ಟಬೇಕು. ಈ ಬಗ್ಗೆ ಪೊಲೀಸರಿಗೆ ಹಾಗೂ ಕಾರ್ಮಿಕ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.