ಬೆಂಗಳೂರು: ಡಿ.ಜೆ ಹಳ್ಳಿ ಬಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ಪೊಲೀಸರ ಜೊತೆಗೆ ಎನ್ಐಎ ಕೂಡ ತನಿಖೆ ನಡೆಸುತ್ತಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಎಸ್ ಡಿ ಪಿ ಐ ಕಾರ್ಯಕರ್ತರು ಭಾಗಿಯಾಗಿದ್ದು, ಇವರು ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸದ್ಯಕ್ಕೆ ಎನ್ಐಎ ತನಿಖೆ ನಡೆಸಲು ನಿರ್ಧಾರ ಮಾಡಿದೆ. ಸಿಸಿಬಿ, ಉಗ್ರ ಸಂಘಟನೆಯ ತನಿಖಾಧಿಕಾರಿಗಳಿಂದ ಎನ್ಐಎ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಉಗ್ರ ಸಂಘಟನೆ ಜೊತೆ ಲಿಂಕ್ ಹೊಂದಿರುವ ಸಮೀಯುದ್ದೀನ್ ಹಾಗೂ ಇತರ 40 ಜನರನ್ನು ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಭಯೋತ್ಪಾದಕ ಜೊತೆ ಲಿಂಕ್ ಹೊಂದಿರುವುದು ಗೊತ್ತಾಗಿದೆ.
2013 ರಲ್ಲಿ ನಡೆದ ಬಿಜೆಪಿ ಕಚೇರಿ ಸಮೀಪ ಬಾಂಬ್ ಸ್ಫೋಟದಲ್ಲಿ ತಮಿಳುನಾಡು ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆ ಅಲ್ ಉಮ್ಮಾ, 2015 ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ, 2016 ರಲ್ಲಿ ಶಿವಾಜಿನಗರ ಬಳಿ ಆರ್ ಎಸ್ ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರ ಬಹಳ ಸ್ಪಷ್ಟವಾಗಿತ್ತು. ಇದೀಗ ಡಿ.ಜೆ ಹಳ್ಳಿ ಘಟನೆಯಲ್ಲಿ ಕೂಡ ಎಸ್ ಡಿಪಿಐ ಪಾತ್ರ ಇರುವ ಕಾರಣ ಬಂಧಿತ ಎಸ್ ಡಿಪಿಐ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.