ಬೆಂಗಳೂರು : ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಜೊತೆಗೆ ತಿಂಗಳ ವೇತನ ಕಡಿತಗೊಳಿಸಬೇಕು ಎಂದು ಬಿಜೆಪಿ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಲಾಗಿದೆ. ಈ ಅಸಮರ್ಪಕ ಮೌಲ್ಯಮಾಪನ ಮಾಡಿದವರಿಗೆ ದಂಡ ವಿಧಿಸಲಾಗಿದೆ.
ಇವರಿಂದ ವಸೂಲಾದ ದಂಡವೆಷ್ಟು ಎಂದು ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ್, ಈ ಕುರಿತು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಣಯ ಮಾಡುತ್ತೇವೆ ಎಂದರು.
ಉತ್ತರಕ್ಕೆ ತೃಪ್ತರಾಗದ ರವಿಕುಮಾರ್, ಅಸಡ್ಡೆಯಿಂದ ತಪ್ಪು ಆಗಿರೋದು ನಿಜ. ಕೂಡಲೇ ಅಂತಹ ಶಿಕ್ಷಕರನ್ನು ಬ್ಲಾಕ್ ಲಿಸ್ಟ್ ಮಾಡಿ ಮುಂದೆ ಮೌಲ್ಯ ಮಾಪನಕ್ಕೆ ಕರೆಯಬೇಡಿ. ಅಲ್ಲದೆ ಒಂದು ತಿಂಗಳ ಸಂಬಳ ಕಟ್ ಮಾಡಿ ಎಂದು ಮನವಿ ಮಾಡಿದರು.
ಮೂರು ತಿಂಗಳೊಳಗೆ ರಾಜೀವ್ ಗಾಂಧಿ ವಿವಿಗೆ ಶಿಲಾನ್ಯಾಸ : ಇನ್ನು ಮೂರು ತಿಂಗಳಿನಲ್ಲಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶುಂಕುಸ್ಥಾಪನೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ನಿರ್ಮಾಣ ಮಾಡೋದು ಯಾವಾಗ ಎನ್ನುವ ಕುರಿತು ಬಿಜೆಪಿ ಸದಸ್ಯ ಅ.ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಲ್ಲಿ ಒಂದಿಷ್ಟು ವ್ಯಾಜ್ಯಗಳು ಇವೆ.
ವ್ಯಾಜ್ಯ ಇರುವ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಚಿಸಲಾಗಿದೆ. ವ್ಯಾಜ್ಯ ಇರುವ ಕಡೆ ತಡೆಯಾಜ್ಞೆ ತೆರವುಗೊಳಿಸಲು ಕ್ರಮವಹಿಸಲಾಗಿದೆ. ಡಿಪಿಆರ್ ಮಾಡಲು ಈಗಾಗಲೇ ಮಾಡಲು ತಿಳಿಸಲಾಗಿದೆ. ಇನ್ನು ಮೂರು ತಿಂಗಳ ಒಳಗಾಗಿ ಶಂಕು ಸ್ಥಾಪನೆ ಮಾಡಲಾಗುತ್ತದೆ ಎಂದರು.
ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ : ಇನ್ಮುಂದೆ ಬೆರಳಿನ ಸಮಸ್ಯೆಗಳಿಂದಾಗಿ ಬಯೋಮೆಟ್ರಿಕ್ ಕೊಡಲು ಸಾಧ್ಯವಾಗದೆ ಪಡಿತರ ಚೀಟಿದಾರರಿಗೆ ಮ್ಯಾನ್ಯುಯಲ್ ಆಯ್ಕೆ ಪರಿಗಣಿಸಿ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್ ವಿಚಾರವಾಗಿ ಸಮಸ್ಯೆ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಬಡವರಿಗೆ ತಲುಪಬೇಕಾದ ಪಡಿತರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರಿಯಾದ ನಿರ್ವಹಣೆ ಆಗಬೇಕಿದೆ ಎಂದು ಕಾಂಗ್ರೆಸ್ ಸದಸ್ಯ ಎಸ್.ರವಿ ಪ್ರಸ್ತಾಪ ಮಾಡಿದರು.
ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಯೋಮೆಟ್ರಿಕ್ ಇಲ್ಲದ ಕಡೆ ಮ್ಯಾನ್ಯುಯಲ್ ಕೊಡುತ್ತಿದ್ದೇವೆ. ಬೆರಳಿನಗೆರೆ ಸವೆದು ಹೋಗಿವೆ ಅಂತಾ ಇದ್ದಾರೆ. ಪರಿಶೀಲನೆ ಮಾಡಿ ಕ್ರಮವಹಿಸಲಾಗುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಕೇವಲ 2 ಪರ್ಸೆಂಟ್ ಮಾತ್ರ ಕೊಡಲಾಗಿದೆ ಅಂತಿದ್ದಾರೆ. ಹಾಗಾಗಿ, ಎಷ್ಟು ಜನ ಇಂತವರು ಇದ್ದಾರೋ ಅವರಿಗೆಲ್ಲ ಮ್ಯಾನ್ಯುಯಲ್ ಕೊಡಿ ಎಂದು ಸೂಚಿಸಿದರು. ಇದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಒಪ್ಪಿಗೆ ನೀಡಿದರು.
ಸಿಎಂ ಸಾಂತ್ವನ ಯೋಜನೆ ವಿಲೀನ : ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯನ್ನ ಎಬಿಆರ್ಕೆ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಸಾಂತ್ವನ ಹರೀಶ್ ಯೋಜನೆ ವಿಚಾರ ಈ ಯೋಜನೆ ಜಾರಿಯಲ್ಲಿದೆಯೇ? ಇದ್ದಲ್ಲಿ ಯೋಜನೆಯನ್ನ ಯಾವಾಗ ಜಾರಿಗೊಳಿಸಲಾಯಿತು? ಇದರ ಉದ್ದೇಶವೇನು? ಎಂದು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೆಲವು ದಿನ ಈ ಯೋಜನೆ ಇತ್ತು. ಸಿಎಂ ಸಾಂತ್ವನ ಹರೀಶ್ ಯೋಜನೆ ಹಾಗೂ ಯಶಸ್ವಿನಿ ಯೋಜನೆಗಳಲ್ಲಿ ಅನೇಕ ಸಂದರ್ಭಗಳಲ್ಲಿ ನಕಲಿ ಆಗುತ್ತಿತ್ತು.
ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಬಿಪಿಎಲ್, ಎಪಿಎಲ್ ಸೇರಿಸಿ ಒಂದು ಪಾಲಿಸಿ ತಂದಿದ್ದಾರೆ. ಹರೀಶ್ ಸೇವೆಯಲ್ಲಿ 25 ಸಾವಿರ ಖರ್ಚು ಮಾಡೋಕೆ ಅವಕಾಶ ಇತ್ತು. ಈಗಲೂ ತುರ್ತು ಇರುವವರಿಗೆ ಎಬಿಆರ್ಕೆಯಲ್ಲಿ ಈ ಯೋಜನೆ ಇದೆ. ಹರೀಶ್ ಯೋಜನೆಯನ್ನ ಎಬಿಆರ್ಕೆ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.