ಬೆಂಗಳೂರು : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರ ರೂಪದ ವರದಿ ಕುರಿತು ಜಯಪ್ರಕಾಶ್ ಹೆಗ್ಡೆ ಪರಿಶೀಲಿಸಿ ಮಂಡಿಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮುಂದೇನು ಮಾಡಬೇಕು ಎಂದು ತೀರ್ಮಾನಿಸಲಾಗುತ್ತದೆ.
ಜಾತಿಗಣತಿ ವಿಚಾರದಲ್ಲಿ ನಮ್ಮಲ್ಲೇನೂ ಗೊಂದಲ ಇಲ್ಲ. ಹಿಂದೆ ಗೊಂದಲ ಆಗಿದ್ದಕ್ಕೆ ನಾವು ಕಾರಣರೂ ಅಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಜಾತಿ ಜನಗಣತಿ ನಡೆದಿತ್ತು.
200 ಕೋಟಿ ಬಿಡುಗಡೆ ಮಾಡಿ, 162 ಕೋಟಿ ರೂಪಾಯಿ ಖರ್ಚು ಮಾಡಿ, ಕಾಂತರಾಜ ಆಯೋಗದಿಂದ ಜಾತಿ ಜನಗಣತಿ ನಡೆಸಲಾಗಿತ್ತು. ಅವರ ಅವಧಿಯಲ್ಲಿ ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ ಎಂಬುದು ನನಗೆ ತಿಳಿಯದು. ಸಿದ್ದರಾಮಯ್ಯ ಅವರೇ ತಿಳಿಸಬೇಕು ಎಂದರು.

ಪ್ರಸ್ತುತ ಜಯಪ್ರಕಾಶ್ ಹೆಗ್ಡೆ ಅವರನ್ನು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರನ್ನಾಗಿ ಹಿಂದಿನ ಯಡಿಯೂರಪ್ಪ ಸರ್ಕಾರ ನೇಮಿಸಿದೆ. ಜಾತಿ ಜನಗಣತಿಗೆ ಸದಸ್ಯ ಕಾರ್ಯದರ್ಶಿಯ ಸಹಿಯೇ ಇಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಗಣತಿ ವರದಿಯ ಅಧಿಕೃತತೆ ಬಗ್ಗೆ ಪರಿಶೀಲಿಸಲು ಸಮಯ ಬೇಕೆಂದೂ ಅವರು ತಿಳಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಅವರು ಪರಿಶೀಲಿಸಿ ಮಂಡಿಸಿದ ಬಳಿಕ ಸಚಿವ ಸಂಪುಟವು ಆ ಕುರಿತು ತೀರ್ಮಾನಿಸಲಿದೆ. ನಮ್ಮಲ್ಲೇನೂ ಗೊಂದಲ ಇಲ್ಲ. ಹಿಂದೆ ಗೊಂದಲ ಆದುದಕ್ಕೆ ನಾವು ಕಾರಣರಲ್ಲ ಎಂದರು.
ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲಾಗುತ್ತದೆ. ಅನಗತ್ಯ ಖರ್ಚು-ವೆಚ್ಚ ನಿರ್ಬಂಧಿಸಲು ಯೋಚನೆ ಮಾಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ದೂರಗಾಮಿ ಯೋಜನೆಗಳನ್ನು ಜಾರಿಗೊಳಿಸಿ ಕಟ್ಟಕಡೆಯ ಬಡವರಿಗೆ ಮೂಲಸೌಕರ್ಯ ಮತ್ತು ಬದುಕನ್ನು ಕಟ್ಟಿ ಕೊಡುವುದು, ಅವರ ಮಕ್ಕಳಿಗೆ ಶಿಕ್ಷಣ ಕೊಡುವುದು, ಅಸ್ಪೃಶ್ಯತೆ ನಿವಾರಿಸುವುದು, ಸಮಾಜದ ಮುಖ್ಯವಾಹಿನಿಗೆ ಅವರನ್ನು ತರುವುದು ನನ್ನ ಮತ್ತು ನಮ್ಮ ಸರ್ಕಾರದ ಗುರಿ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸುಮಾರು 1.27 ಕೋಟಿ ಜನಸಂಖ್ಯೆ ಇದೆ. 28 ಲಕ್ಷ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೂ ಮೂಲಸೌಕರ್ಯ, ಮನೆ, ಶೌಚಾಲಯ, ವಿದ್ಯುತ್ ದೀಪಗಳು, ಹಕ್ಕುಪತ್ರ, ಶಿಕ್ಷಣ, ಕುಡಿಯುವ ನೀರು ಇವುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.
ಇಲಾಖೆಯ ಮಾಹಿತಿ, ಕುತೂಹಲ, ಜಿಜ್ಞಾಸೆ, ಆಸಕ್ತಿ, ಕೆಲವರ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ನಡೆದಿದೆ. ಪಕ್ಷದ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತವರ ತಂಡವು ಅನೇಕ ಸಲಹೆ, ಸೂಚನೆಗಳನ್ನು ನೀಡಿದೆ. ತಿಗಳರ ಸಮಾಜದ ಮುಖಂಡರು, ಸ್ವಾಮೀಜಿಗಳೂ ಬಂದು ಅನುಭವ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಆದೇಶದಂತೆ ರಾಜ್ಯದ ಎಲ್ಲ ಮಂತ್ರಿಗಳಾದ ನಾವು ರಾಜ್ಯ ಕಾರ್ಯಾಲಯಕ್ಕೆ ಬಂದು ಜನರ ಅಹವಾಲಯ ಸ್ವೀಕರಿಸುತ್ತಿದ್ದೇವೆ. ಪಾರ್ಟಿಯ ಸಂಘಟನೆ ದೃಷ್ಟಿಯಿಂದ ಮತ್ತು ಅಹವಾಲು ಆಲಿಸುವ ದೃಷ್ಟಿಯಿಂದ ಇದೊಂದು ಒಳ್ಳೆಯ ನಿಯಮ ಎಂದು ಮೆಚ್ಚುಗೆ ಸೂಚಿಸಿದರು.
ಓದಿ: 800 ಕೋಟಿ ರೂ.ಗೆ ಜಪಾನ್ನ ಟೆಕ್ನೋ ಪ್ರೋ ಪಾಲಾದ ಉಡುಪಿಯ ರೋಬೋಸಾಫ್ಟ್ ಕಂಪನಿ..