ಬೆಂಗಳೂರು: ಕೊರೊನಾ ಎರಡನೇ ಅಲೆ ವ್ಯಾಪಕ ಆತಂಕವನ್ನು ಮೂಡಿಸುತ್ತಿದ್ದು ಸರ್ಕಾರ ಇದರ ನಿಯಂತ್ರಣಕ್ಕೆ ಸಮರ್ಪಕ ಹಾಗೂ ಸಮರ್ಥ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹೆಚ್. ಕೆ. ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
![Measures to control corona second wave must be taken: HKP letter to the government](https://etvbharatimages.akamaized.net/etvbharat/prod-images/kn-bng-01-hkp-letter-to-government-script-7208077_23122020092417_2312f_1608695657_375.jpg)
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಗೆ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿರುವ ಅವರು, ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪರಿಣಾಮಕಾರಿಯಾದ ಕ್ರಮಗಳ ಕೊರತೆಯಿಂದ ರಾಜ್ಯದಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರಾಜ್ಯದ ಮೂರನೇ ಒಂದು ಭಾಗ ಜನಸಂಖ್ಯೆ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಭಾರಿ ಯಾತನೆ ಅನುಭವಿಸಿದೆ. 2020 ರ ಮಾರ್ಚ್ 23 ರಂದು ವಿಧಾನಸಭೆಯಲ್ಲಿ ನಾನು ವಿದೇಶದಿಂದ ಬರುವ ಪ್ರಯಾಣಿಕರ ಬಗ್ಗೆ ವಿಷಯ ಪ್ರಸ್ತಾಪಿಸಿ ಈಗಾಗಲೇ ಬಂದಿರುವ 22 ಸಾವಿರ ಜನರನ್ನು ಪ್ರತ್ಯೇಕಿಸಬೇಕೆಂದು ಒತ್ತಾಯಿಸಿದ್ದೆ. ಆದರೆ, ನನ್ನ ಈ ಕಳಕಳಿಯ ಕಾಳಜಿ ಪೂರ್ವಕವಾದ ಒತ್ತಾಯವನ್ನು ನಿರ್ಲಕ್ಷಿಸಲಾಯಿತು ಎಂದಿದ್ದಾರೆ.
ಈಗ ಬ್ರಿಟನ್ ದೇಶದಲ್ಲಿ ಕೊರೊನಾ ವೈರಸ್ನ 2ನೇ ಪ್ರಭೇದ ಕಾಣಿಸಿಕೊಂಡಿರುವ ವರದಿಗಳು ಮತ್ತು ಈ 2ನೇ ಪ್ರಭೇದ ಹರಡುವಿಕೆಯಲ್ಲಿ ಇನ್ನಷ್ಟು ಹೆಚ್ಚು ವ್ಯಾಪಕವಾಗಿದೆ ಎಂದು ಗೊತ್ತಾಗಿ ಕಳವಳಕಾರಿ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ರೋಗ ಹರಡುವಿಕೆ ತೀವ್ರ ಮತ್ತು ವ್ಯಾಪಕವಾಗಿದೆಯೆಂದು ತಿಳಿದು ಸಹ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲೀ ಬ್ರಿಟನ್, ನೆದರ್ಲ್ಯಾಂಡ್ ಮತ್ತು ಇತರ ದೇಶಗಳಿಂದ ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಪ್ರಯಾಣಿಕರ ಚಲನವಲನವನ್ನು ನಿಯಂತ್ರಿಸುವ ಅಥವಾ ನಿಗಾವಹಿಸುವ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ. ನನಗೆ ಬಂದಿರುವ ಮಾಹಿತಿಯಂತೆ 12,300 ಜನ ಪ್ರಯಾಣಿಕರು ಕೊರೊನಾ ಪ್ರಭೇದ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಬಂದಿಳಿದಿದ್ದಾರೆ ಎಂದು ವಿವರಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕರನ್ನು ಕನಿಷ್ಠ ಸ್ಕ್ರೀನಿಂಗ್ ಸಹ ಮಾಡಲಾಗಿಲ್ಲ. ಈ ಕೂಡಲೇ ಕಾರ್ಯಪ್ರವೃತ್ತರಾಗಿ ಕೊರೊನಾದ 2ನೇ ಪ್ರಭೇದ ಕಂಡು ಬಂದಿರುವ ದೇಶಗಳಿಂದ ಆಗಮಿಸಿರುವ ಪ್ರಯಾಣಿಕರನ್ನು ಕೂಡಲೇ ಪ್ರತ್ಯೇಕಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುವೆ ಎಂದು ಪತ್ರ ಬರೆದಿದ್ದಾರೆ.