ಬೆಂಗಳೂರು: ಪ್ರತಿ ಪಕ್ಷದವರು ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಮಾತನಾಡಿ, ಪೌರತ್ವ ತಿದ್ದುಪಡಿ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕವಷ್ಟೇ ತಿದ್ದುಪಡಿ ಮಸೂದೆ ಪಾಸಾಗಿದೆ ಎಂದು ಹೇಳುತ್ತಾ ಕಾಯ್ದೆಯನ್ನು ಸಿಎಂ ಸಮರ್ಥಿಸಿಕೊಂಡರು.
'ಕುಮಾರಸ್ವಾಮಿ ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿದ್ದಾರೆ'
ಮಂಗಳೂರಿನಲ್ಲಿ ಜನರು ಪ್ರತಿಭಟನೆಗೆ ಬಂದಿದ್ರು, ಯುದ್ಧಕ್ಕೆ ಬಂದಿರಲಿಲ್ಲ. ಕೇರಳದವರು ಮನುಷ್ಯರಲ್ವಾ? ಅವರು ಪ್ರತಿಭಟಿಸಬಾರದಾ? ಅಂತ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಕಲ್ಲು ತೂರಾಟ ಮಾಡಿದ್ದೇ ಈ ಮಂದಿ. ಪೊಲೀಸ್ ಶಸ್ತ್ರಾಗಾರಕ್ಕೆ ನುಗ್ಗಲು ಪ್ರಯತ್ನ ಮಾಡಿದವರು ಇದೇ ಪ್ರತಿಭಟನಾಕಾರರು. ಕುಮಾರಸ್ವಾಮಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಲ್ಪಸಂಖ್ಯಾತರ ದಾರಿತಪ್ಪಿಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಕಿಡಿ ಕಾರಿದರು.
'ಮಂಗಳೂರಿನಲ್ಲಿ ಹೊರಗಿನವರ ಕೃತ್ಯ'
ಮಂಗಳೂರಿನಲ್ಲಿ ನಾನು ಮುಸ್ಲಿಂ ಮುಖಂಡರು ಹಾಗು ಧರ್ಮಗುರುಗಳ ಜೊತೆ ಮಾತನಾಡಿದ್ದೇನೆ. ಯಾರೂ ಕಾಯ್ದೆ ವಿರೋಧಿಸಿ ಮಾತನಾಡಲಿಲ್ಲ. ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ. ಇದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಲಿ. ಮನಮೋಹನ್ ಸಿಂಗ್ ಹಿಂದೆಯೇ ಈ ಬಗ್ಗೆ ಮಾತನಾಡಿದ್ದರು. ಈಗ ಗೊಂದಲ ಹುಟ್ಟಿಸುತ್ತಿರುವುದೇಕೆ? ಮಂಗಳೂರಲ್ಲಿ ಸ್ವಲ್ಪ ವ್ಯತ್ಯಾಸ ಆಗಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಮಂಗಳೂರಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡವರು ಬಂದು ಕಲ್ಲು ಎಸೆದರು. ಹೊರಗಿಂದ ಬಂದವರಿಗೆ ಮಂಗಳೂರಿನಲ್ಲಿ ಏನು ಕೆಲಸ? ಪ್ರಚೋದನೆಯಿಂದಾಗಿ ಹೊರಗಿಂದ ಬಂದವರು ಜನರ ಮಧ್ಯೆ ಸೇರಿಕೊಂಡು ಕಲ್ಲು ಎಸೆದಿದ್ದಾರೆ ಎಂದರು.
'ಗೋಲಿಬಾರ್ ಬಗ್ಗೆ ಯಾವ ರೀತಿಯ ತನಿಖೆ ಎಂದು ನಿರ್ಧರಿಸಿಲ್ಲ'
ಗೋಲಿಬಾರ್ ಕುರಿತು ಯಾವ ರೀತಿಯ ತನಿಖೆ ಅಂತ ಇನ್ನೂ ನಿರ್ಧರಿಸಿಲ್ಲ. ಗೃಹ ಸಚಿವರು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಗೃಹಸಚಿವರು ಬಂದ ಮೇಲೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ.
'ರಾಜ್ಯದಲ್ಲೂ ಕಾಯ್ದೆ ಜಾರಿ'
ಕಾಯ್ದೆ ಈಗಾಗಲೇ ಜಾರಿಯಾಗಿದೆ. ರಾಜ್ಯದಲ್ಲಿ ಕಾಯ್ದೆ ಜಾರಿಗೆ ಸಿದ್ಧತೆ ಅಂತ ಏನಿಲ್ಲ. ಕಾಯ್ದೆ ಜಾರಿಯಾದ ಮೇಲೆ ನಮ್ಮಲ್ಲೂ ಆಗುತ್ತದೆ. ರಾಜ್ಯದಲ್ಲಿ ನುಸುಳುಕೋರರ ಸಂಖ್ಯೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಎಷ್ಟು ಜನ ಅಕ್ರಮ ವಲಸಿಗರು ರಾಜ್ಯದಲ್ಲಿದ್ದಾರೆ ಎಂಬ ಬಗ್ಗೆ ಹಿಂದಿನಿಂದಲೂ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಬಿಎಸ್ವೈ, ನೀವು ಈಗಲೇ ಅಡ್ರಸ್ಗೆ ಇಲ್ಲದಂತಾಗಿದ್ದು, ಮೂರುವರೆ ವರ್ಷ ಆದ ಮೇಲೆ ನಿಮ್ಮ ಪರಿಸ್ಥಿತಿ ಹೇಗಾಗಿರುತ್ತೋ ಗೊತ್ತಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿ ಎಷ್ಟು ದಿನ ಇರ್ತಾರೆ ನೋಡೋಣ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ಮೂರೂವರೆ ವರ್ಷ ನನ್ನನ್ನು ಏನೂ ಮಾಡೋಕ್ಕಾಗಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.