ಬೆಂಗಳೂರು : ಎಸ್ಸಿ-ಎಸ್ಟಿಗಳಿಗೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅಂಬೇಡ್ಕರ್ ವಿಶೇಷ ಸ್ಥಾನಮಾನ ನೀಡಿದ್ದರು. ಆದರೆ, ಅದನ್ನು ತೆಗೆದು ಹಾಕುವುದು ಆರೆಸ್ಸೆಸ್ನ ಸಿದ್ಧಾಂತವಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಇಂದಿನ ರಾಜಕೀಯ ವ್ಯವಸ್ಥೆ, ಹಿಂದೆ ಬ್ರಿಟಿಷರು ನಡೆಸುತ್ತಿದ್ದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಸಮಗ್ರ ಸಮುದಾಯಗಳ ಹಿತವನ್ನು ಕಾಪಾಡುವ ಕಾರ್ಯ ಆಗುತ್ತಿಲ್ಲ, ಬದಲಾಗಿ ಜಾತಿ -ಧರ್ಮ ಹಾಗೂ ಭಾಷೆ ಆಧಾರದ ಮೇಲೆ ದೇಶ ರಾಜ್ಯ ಪ್ರಾಂತ್ಯಗಳನ್ನು ವಿಭಜಿಸುವ ಕಾರ್ಯ ಆಗುತ್ತಿದೆ. ಒಂದೊಮ್ಮೆ ಬಿಜೆಪಿ ಸರ್ಕಾರದ ಕಾರ್ಯಗಳನ್ನು ಪ್ರಶ್ನಿಸಲು ಮುಂದಾದರೆ ಅಂಥವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕಾರ್ಯ ಮಾಡಲಾಗುತ್ತಿದೆ. ಈ ರೀತಿ ಸತ್ಯದ ವಿರುದ್ಧ ಮಾತನಾಡುವವರ ಬಾಯಿ ಕಟ್ಟಿ ಹಾಕುವ ಕಾರ್ಯವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿ ಎಂದು ಕರೆಯುವುದು ಸರಿಯಲ್ಲ, ವಾಸ್ತವವಾಗಿ ಜಾತಿ ವ್ಯವಸ್ಥೆಯನ್ನು ಆಚರಣೆ ಮಾಡುವರು ನಿಜವಾದ ದೇಶದ್ರೋಹಿಗಳು ಎಂಬುವುದು ನನ್ನ ಅಭಿಪ್ರಾಯ. ಜಾತಿ ಜಾತಿಗಳನ್ನು ಎತ್ತಿಕಟ್ಟಿ ಕಲಹ ಸೃಷ್ಟಿಸಿ ತಮ್ಮನ್ನು ತಾವು ದೇಶಭಕ್ತರು ಎಂದು ಬಿಂಬಿಸಿಕೊಳ್ಳುವವರಿಂದಲೇ ದೇಶಕ್ಕೆ ಅಪಾಯ ಕಾದಿದೆ ಎಂದರು.
ಓದಿ: ಸಭಾಪತಿ ಬದಲಾವಣೆ ವಿಚಾರದಲ್ಲಿ ನಮ್ಮ ರಾಜಕೀಯ ಬದ್ಧತೆ ಬದಲಾಗಲ್ಲ: ಡಿಕೆಶಿ
ಅಂಬೇಡ್ಕರ್ ಅವರನ್ನು ಜಯಂತಿ, ಪರಿನಿರ್ವಾಣ, ಸಂವಿಧಾನ ಮತ್ತು ಗಣರಾಜ್ಯೋತ್ಸವ ದಿನಗಳಷ್ಟೇ ಸ್ಮರಿಸಿದರೆ ಸಾಲದು, ಇವರ ಪ್ರತಿ ಚಿಂತನೆಯಲ್ಲೂ ಒಂದು ಪರಿಹಾರ ಅಡಗಿದೆ. ಬಹುತೇಕ ಎಲ್ಲಾ ಕಡೆ ಅಂಬೇಡ್ಕರ್ ಮಾತುಗಳನ್ನು ಉಲ್ಲೇಖಿಸಿಯೇ ಮಾತನಾಡುವ ಪ್ರವೃತ್ತಿ ಬೆಳೆದಿದೆ. ದುರಂತವೆಂದರೆ ಇದನ್ನು ಆಚರಣೆಗೆ ತರುವ ಕಾರ್ಯ ಆಗುತ್ತಿಲ್ಲ ಎಂದು ಹೇಳಿದರು.
ದೇಶದ ಕಾನೂನು ಎಲ್ಲರನ್ನೂ ರಕ್ಷಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೆಲವರ ರಕ್ಷಣೆಗೆ ಮಾತ್ರ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿದೆ. ಶೋಷಿತ ವರ್ಗಗಳ ಉನ್ನತಿಯ ವಿಚಾರದಲ್ಲೂ ಸಾಕಷ್ಟು ದೊಡ್ಡಮಟ್ಟದ ತಾರತಮ್ಯ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಅವರು ಹೇಳಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಜೊತೆಗೆ ಸಮಾನತೆ, ಸ್ವಾತಂತ್ರ್ಯ ವ್ಯವಸ್ಥೆಗೆ ಧಕ್ಕೆ ತರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜಾತಿ ವ್ಯವಸ್ಥೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವವರನ್ನು ಸಮರ್ಥವಾಗಿ ಮಟ್ಟ ಹಾಕುವ ಕಾರ್ಯ ಆಗಬೇಕು. ದೇಶಕ್ಕಾಗಿ ಒಗ್ಗಟ್ಟಿನಿಂದ ನಿಲ್ಲುವ ಹಾಗೂ ಭ್ರಾತೃತ್ವವನ್ನು ಸಾರುವಂತಹ ಜೊತೆಗೆ ಸಮಾನತೆಯನ್ನು ಪ್ರತಿಪಾದಿಸುವ ಅಗತ್ಯ ದೇಶದಲ್ಲಿ ತುರ್ತಾಗಿ ಇದೆ. ಸಮಾಜದಲ್ಲಿ ಬದಲಾವಣೆ ಅನಿವಾರ್ಯವಾಗಿದೆ, ಅದನ್ನು ಇಂದಿನ ಸಮುದಾಯ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.