ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ಕೆರೆಗಳಿಗೆ ನೆರೆಹೊರೆಯ ಕಾರ್ಖಾನೆಗಳು ದೊಡ್ಡ ತಲೆನೋವಾಗಿ ಪರಿಣಮಿಸುತ್ತಲೇ ಇರುತ್ತವೆ. ಲಾಕ್ಡೌನ್ನಿಂದ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ಈ ಬೃಹತ್ ಕಾಲುವೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಿಂದ ರಾಸಾಯನಿಯುಕ್ತ ನೀರು ಮತ್ತೆ ರಾಜಕಾಲುವೆ ಸೇರುತ್ತಿದೆ ಎನ್ನಲಾಗುತ್ತಿದೆ.
ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಲಾಕ್ಡೌನ್ ಸಡಿಲಿಕೆ ಬಳಿಕವೂ ಕಾರ್ಖಾನೆಗಳ ಕಲುಷಿತ ನೀರನ್ನು ಜಲಮೂಲಗಳಿಗೆ ಹರಿಯಲು ಬಿಡದಂತೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿ ನಡೆಸಿದ್ದವು. ಆದ್ರೆ ಆ ಚರ್ಚೆ ಒಂದು ದಿನದ ಸಭೆಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಮತ್ತೆ ಕಾರ್ಖಾನೆಗಳು ಪುನರಾರಂಭವಾಗಿದ್ದು, ರಾಜಕಾಲುವೆಗಳ ಮೂಲಕ ರಾಸಾಯನಿಕಯುಕ್ತ ನೀರು ಕೆರೆ ಸೇರುತ್ತಿದೆ.
ಕಾರ್ಖಾನೆಗಳಿಗೆ ನೋಟಿಸ್ ನೀಡಿದ್ರೂ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಕೆಎಸ್ಪಿಸಿಬಿ ಜೊತೆ ಈಗಾಗಲೇ ಚರ್ಚೆ ನಡೆದಿದೆ. ಆದ್ರೆ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಎಲ್ಲಾ ಅಧಿಕಾರಿಗಳು ನಿರತರಾಗಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳಲು, ಯೋಜನೆ ರೂಪಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ.
ಪೀಣ್ಯ ಕೈಗಾರಿಕಾ ವಲಯಗಳಲ್ಲಿ ಅಂತರ್ಜಲ ಸಹ ಕಲುಷಿತಗೊಂಡಿದೆ. ಯಾವುದೇ ಹೊಸ ಕೈಗಾರಿಕೆಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಈ ಹಿಂದೆಯೇ ನೋಟಿಸ್ ನೀಡಿತ್ತು. ನಗರದ ಹಲಸೂರು ಕೆರೆಯ ಕಳೆ ಹಾಗೂ ಹೂಳನ್ನು ಮಿಲಿಟರಿ ಸಿಬ್ಬಂದಿ ಸ್ವಚ್ಛಗೊಳಿಸಿದ್ದರು. ಆದರೆ ಇಂದಿಗೂ ಸಹ ರಾಜಕಾಲುವೆ ನೀರು ಕೆರೆ ಸೇರುತ್ತಿದೆ. ಕಲುಷಿತ ನೀರಿನಲ್ಲಿ ಆಕ್ಸಿಜನ್ ಪ್ರಮಾಣವೂ ಕಡಿಮೆ ಇದ್ದು, ಜಲಚರಗಳ ಜೀವಕ್ಕೆ ಅಪಾಯಕಾರಿಯಾಗಿದೆ.
ಎನ್ಜಿಟಿ ಆದೇಶದಂತೆ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ. ಅಲ್ಲದೆ ಎನ್ಜಿಟಿ ಆದೇಶದಂತೆ ರಾಜಕಾಲುವೆಯ ನೀರು ಕೆರೆ ಸೇರುವುದನ್ನು ತಡೆಯಲು ಪ್ರತ್ಯೇಕ ಕಾಲುವೆ ನಿರ್ಮಿಸಲಾಗಿತ್ತು. ಕಲುಷಿತವಾಗಿದ್ದ ಕೆರೆಯ ನೀರನ್ನು ಖಾಲಿ ಮಾಡಲಾಗಿತ್ತು. ಆದ್ರೆ ಈ ಕೆರೆಗಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ರಾಸಾಯನಿಕಯುಕ್ತ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಮಾಡುವ ಮೂಲಕ ನಗರದ ಕೆರೆಗಳನ್ನು ಸಂರಕ್ಷಿಸಬೇಕಿದೆ.