ಬೆಂಗಳೂರು: ಮಾನವ ಕಳ್ಳಸಾಗಣೆ ಮೂಲಕ ಒಡಿಶಾ ಮತ್ತು ಚತ್ತೀಸ್ಗಢದಿಂದ ಕರೆತಂದು ಯಲಹಂಕ ಇಟ್ಟಿಗೆ ಗೂಡಿನಲ್ಲಿಟ್ಟಿದ್ದ 204 ಜೀತ ಕಾರ್ಮಿಕರನ್ನು ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಇದರಲ್ಲಿ ಸುಮಾರು 40 ಮಕ್ಕಳು ಸೇರಿದಂತೆ 204 ಶೋಷಿತರು ಒಡಿಶಾ ಮತ್ತು ಛತ್ತೀಸ್ಗಢ ಮೂಲದವರಾಗಿದ್ದಾರೆ. ನಗರದ ಯಲಹಂಕದಲ್ಲಿರುವ ಬೈಲಕೆರೆಹಳ್ಳಿಯಲ್ಲಿ ಎರಡು ಇಟ್ಟಿಗೆ ಗೂಡುಗಳಲ್ಲಿದ್ದ 204 ಜೀತ ಕಾರ್ಮಿಕರನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ್ ಹಾಗೂ ಹಿರಿಯ ನಾಗರಿಕ ನ್ಯಾಯಾಧೀಶರ ನೇತೃತ್ವದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಸ್ಥಳೀಯ ಪೊಲೀಸರ ಜೊತೆಗೆ ಹಾಗೂ ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್(ಐಜೆಎಂ)ನವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಈ ವೇಳೆ ಮೂವರು ಮೇಲ್ವಿಚಾರಕರು ಮತ್ತು ಒಬ್ಬ ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 370(ವ್ಯಕ್ತಿಗಳ ಕಳ್ಳಸಾಗಣೆ), ಜೀತ ಕಾರ್ಮಿಕ ಪದ್ಧತಿ (ನಿಷೇಧ) ಕಾಯ್ದೆ, 1976 ಮತ್ತು ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ರ ಅಡಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿಸಿದ 204 ಜನರಲ್ಲಿ 163 ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಉಳಿದವರು ಅವಲಂಬಿತ ಮಕ್ಕಳಾಗಿದ್ದಾರೆ. ಎಲ್ಲಾ 163 ಕಾರ್ಮಿಕರಿಗೆ ಬೆಂಗಳೂರು ನಗರ ಜಿಲ್ಲಾಡಳಿತವು ಬಿಡುಗಡೆ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಎಲ್ಲಾ ಜೀತ ಕಾರ್ಮಿಕರು ಒಡಿಶಾದ ಬಲಂಗೀರ್, ನೌಪಾಡಾ ಮತ್ತು ಸುಬರ್ಣಾಪುರ ಜಿಲ್ಲೆ ಮತ್ತು ಛತ್ತೀಸ್ಗಢದ ಗರಿಯಾಬಂದ್ ಜಿಲ್ಲೆಯವರಾಗಿದ್ದಾರೆ.
ಆರು ತಿಂಗಳ ಹಿಂದೆ ಎಲ್ಲಾ 204 ಕಾರ್ಮಿಕರನ್ನು ನಾಲ್ಕು ಭಿನ್ನ ಕಳ್ಳಸಾಗಣೆದಾರರು ರೈಲಿನ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಒಂದು ಇಟ್ಟಿಗೆ ಗೂಡಿನಲ್ಲಿ ಒಂದೇ ಬಾರಿ 70 ಜನರನ್ನು ಐದು ತಿಂಗಳ ಹಿಂದೆ ಕಳ್ಳಸಾಗಾಣೆದಾರನೊಬ್ಬನು ಕರೆತಂದಿದ್ದ. ಕಾರ್ಮಿಕರನ್ನು ಬೆಂಗಳೂರಿಗೆ ಕರೆತರುವ ಮೊದಲು ಕಳ್ಳಸಾಗಾಣಿಕೆದಾರನು ಅವರಿಗೆ 15,000 ದಿಂದ 30,000 ವರೆಗಿನ ಮುಂಗಡ ಹಣ ನೀಡಿದ್ದರು. ಅವರಿಗೆ ಉತ್ತಮ ವೇತನ, ಉತ್ತಮ ವಸತಿ ಮತ್ತು ದಿನಕ್ಕೆ ಕೇವಲ ಎಂಟು ಗಂಟೆಗಳ ಕೆಲಸ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅವರು ಬೆಂಗಳೂರಿನಲ್ಲಿ ಕೆಲಸ ಪ್ರಾರಂಭಿಸಿದಾಗ ಈ ಎಲ್ಲ ಭರವಸೆಗಳು ಸುಳ್ಳು ಎಂದು ಅವರಿಗೆ ಗೊತ್ತಾಯಿತು. ಕಾರ್ಮಿಕರನ್ನು ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು. ಅಲ್ಲದೆ ಒಬ್ಬ ವ್ಯಕ್ತಿಗೆ ದಿನಕ್ಕೆ ಕೇವಲ 35 ರೂ. ನೀಡಲಾಗುತ್ತಿತ್ತು.