ಬೆಂಗಳೂರು: ನಗರದ ರಸ್ತೆಗಳಲ್ಲಿರುವ ಗುಂಡಿಗಳಿಗೆ ಹೂವಿಟ್ಟು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇಂದು ಸಂಜೆ ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಟಿ ಎ ಶರವಣ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಟಿ ಎ ಶರವಣ, ಇಡೀ ದೇಶ ಬೆಳಕಿನ ಹಬ್ಬ ದೀಪಾವಳಿ ಹಬ್ಬ ಆಚರಿಸುತ್ತಿದ್ದರೆ ಕರ್ನಾಟಕ ಸರ್ಕಾರ ಮಾತ್ರ ಅಂಧಕಾರದಲ್ಲಿದೆ. ಬೆಂಗಳೂರಿನ ಗುಂಡಿಗಳಿಂದ ಕಳೆದ ನಾಲ್ಕು ವರ್ಷದಲ್ಲಿ 10 ಮಂದಿ ಬಲಿಯಾಗಿದ್ದಾರೆ. ಆದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಲೆಕ್ಕವಿಲ್ಲದಷ್ಟು ಜನ ಕೈ ಕಾಲು ಮುರಿದುಕೊಂಡು ಜೀವನವನ್ನೇ ಕಳೆದುಕೊಂಡಿದ್ದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿಗಳಲ್ಲಿ ದೀಪ ಹಚ್ಚಿ ಪ್ರತಿಭಟನೆ: ಮಾಧ್ಯಮಗಳ ಮೂಲಕ ಬೆಂಗಳೂರಿನ ರಸ್ತೆಗಳ ಚಿತ್ರಣ ಹರಾಜಾಗುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಪರದಾಡುತ್ತಿದ್ದಾರೆ. ಇದೆಲ್ಲಾ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ?. ಇದಕ್ಕಾಗಿ ಗುಂಡಿಗಳಲ್ಲಿ ದೀಪ ಹಚ್ಚಿದ್ದು, ಕಣ್ಣು ಬಿಟ್ಟು ಒಮ್ಮೆ ನೋಡಬೇಕು ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಗುಂಡಿಗಳಿಂದ ಕೂಡಿದ ರಸ್ತೆಗಳು: ಬಸ್ ಸಂಚಾರದಲ್ಲಿ ವ್ಯತ್ಯಯ, ವಿದ್ಯಾರ್ಥಿಗಳ ಪರದಾಟ