ಬೆಂಗಳೂರು: 2023ನೇ ವರ್ಷ ಮುಕ್ತಾಯವಾಗುತ್ತಿದೆ. 2024ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ ಈ ವರ್ಷ ಹೊರಡಿಸಿದ್ದ ಮಹತ್ವದ ಆದೇಶಗಳನ್ನು ಒಮ್ಮೆ ಮೆಲುಕು ಹಾಕೋಣ.
- ವಂಶಪಾರಂಪರ್ಯವಾಗಿ ದೇವಾಲಯವೊಂದರ ಅರ್ಚಕ ವೃತ್ತಿ ಪಡೆದುಕೊಳ್ಳಲು ಉತ್ತರಾಧಿಕಾರ ಸಂಬಂಧ ತಂದೆಯ ಕಡೆಯಿಂದ ಇರಬೇಕು.
- ಹಸ್ತ ಚಾಲಿತ (ಮ್ಯಾನ್ಯುಯಲ್) ಖಾತೆ ನೀಡಿದ (ಆಸ್ತಿ ದಾಖಲೆಗಳು) ತಕ್ಷಣ ಇ-ಖಾತಾ ನೀಡಬೇಕು. ಇಲ್ಲವಾಗಿದ್ದಲ್ಲಿ ಸರ್ಕಾರ ಜಾರಿಗೆ ತಂದಿರುವ ಇ-ಖಾತಾ ವ್ಯವಸ್ಥೆ ಉದ್ದೇಶ ಈಡೇರಿದಂತಾಗುವುದಿಲ್ಲ.
- ಭಾರತದವರು ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಮತ್ತೆ ಅಮೆರಿಕಗೆ ಹಿಂದಿರುಗಲು ಮುಂದಾಗಿದ್ದ ವೈದ್ಯರಿಗೆ ಅನಿವಾಸಿ ಭಾರತೀಯ(ಎನ್ಆರ್ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ (ಓಸಿಐ) ಕೋಟಾದಡಿ ಭರಿಸುವ ಶುಲ್ಕ ಪಾವತಿಸಲು ಸೂಚನೆ.
- ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಡೆ ದೇಶದಲ್ಲಿ ಇಂದಿಗೂ ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ.
- ಹದಿನೆಂಟು ವರ್ಷದೊಳಗಿನ ಅಪಾಪ್ತರು ಪ್ರೀತಿ ವ್ಯವಹಾರ ನಡೆಸುವ ಅನುಮತಿ ಇರಬಹುದೇನೋ ಆದರೆ, ದೈಹಿಕ ಸಂಪರ್ಕ ಬೆಳೆಸಲು ಅವಕಾಶವಿಲ್ಲ.
- ಕೊಟ್ಟ ಸಾಲ ಹಿಂದಿರುಗಿಸುವಂತೆ ಒತ್ತಾಯಿಸುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ.
- ದೀನದಲಿತರಿಗೆ ಮೀಸಲಿಟ್ಟ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರಿ ಸೇವೆಯಲ್ಲಿ ಆ ಸಮುದಾಯದ ಪ್ರಾತಿನಿಧ್ಯ ಕಸಿದುಕೊಂಡಂತೆ.
- ಸರ್ಕಾರದ ಅಧೀನದ ಸಂಸ್ಥೆಯಲ್ಲಿ ನಿಗದಿತ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ.
- ವಯಸ್ಸಾದ ಪೋಷಕರನ್ನು ಸಂಧ್ಯಾಕಾಲದಲ್ಲಿ ಅವರ ಆರೈಕೆ ಮಾಡುವ ಜವಾಬ್ದಾರಿ ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲಿರುತ್ತದೆ.
- ಭದ್ರತೆಯಿರುವ ಉದ್ಯೋಗ ಮೌಲ್ಯಯುತವಾದ ಆಸ್ತಿಗೆ ಸಮಾ ಎಂದ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮರೆಮಾಚಿದ ವಕೀಲರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಲು ನಿರಾಕರಣೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ಪ್ರಾಮಾಣಿಕತೆ ಕುರಿತು ಅನುಮಾನದ ನೆರಳು ಬಿದ್ದಲ್ಲಿ ಅದು ಅವರ ಪ್ರತಿಷ್ಠೆಗೆ ಧಕ್ಕೆಯಾಗಲಿದೆ. ಇಡೀ ವ್ಯವಸ್ಥೆ ಕಳಂಕಗೊಳಿಸಲು ಕಾರಣವಾಗಲಿದೆ.
- ರಾಜಧಾನಿ ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತನೆಗೆ ಅನುಮತಿ.
- ನ್ಯಾಯಾಲಯದ ಆದೇಶಗಳು ಸಾಮಾನ್ಯ ಜನತೆ ಹಾಗೂ ದಾವೆದಾರರಿಗೆ ತಿಳಿಸಲು ಕನ್ನಡ ಭಾಷೆಯಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶಗಳು ಪ್ರಕಟಿಸಿ ಹೈಕೋರ್ಟ್ ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ.
- ನ್ಯಾಯಾಲಯದಲ್ಲಿ ಕೆಲಸವಿಲ್ಲದಿದ್ದರೂ ವಿನಾಕಾರಣ ಹೈಕೋರ್ಟ್ಗೆ ಬಂದರೆ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು.
- ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡಲು ಈಶಾ ಪ್ರತಿಷ್ಠಾನಕ್ಕೆ ಅವಕಾಶ.
- ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಅಧಿಕಾರಿಗಳು ದಾಳಿ ನಡೆಸಿ ಯಾವುದೇ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಅವಕಾಶವಿಲ್ಲ.
- ಉದ್ಯೋಗಿಯೊಬ್ಬರು ಉದ್ಯೋಗದಾತರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪರವಾಗಿ ಪತ್ನಿ ಅಥವಾ ಮಕ್ಕಳು ಹಿಂಪಡೆಯಲು ಅವಕಾಶವಿಲ್ಲ.
- ಸಾರ್ವಜನಿಕ ಹಿತಾಸಕ್ತಿಯ ಕುಟುಕು ಕಾರ್ಯಾಚರಣೆ ನಡೆಸಲು ಮಾಧ್ಯಮಗಳಿಗೆ ಅವಕಾಶ ನೀಡಿ ಆದೇಶ.
- ಒತ್ತಡವು ಮನುಷ್ಯನ ಆಧುನಿಕ ಜೀವನದ ಭಾಗವಾಗಿದೆ. ಒತ್ತಡದಲ್ಲಿರುವವರನ್ನು ನೌಕರಿಯಿಂದ ತೆಗೆದಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಬಹುದು.
- ಸರ್ಕಾರ ಮತ್ತದರ ಅಂಗ ಸಂಸ್ಥೆಗಳ ನಡುವೆ ಎದುರಾಗುವ ವ್ಯಾಜ್ಯಗಳನ್ನು ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಃ ನ್ಯಾಯಾಲಯಗಳ ಮೊರೆ ಹೋಗುವುದು ಸರಿಯಾದ ಕ್ರಮವಲ್ಲ.
- ಬೆಂಗಳೂರಿನ ನಾಗವಾರದ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ನ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ಮಹಿಳೆ ಮತ್ತು ಗಂಡು ಮಗು ಸಾವನ್ನಪ್ಪಿದ ಪ್ರಕರಣ ಸಂಬಂಧ ಸ್ವಯಂಪ್ರೇರಿತವಾಗಿ ಅರ್ಜಿದಾಖಲಿಸಿಕೊಂಡ ವಿಚಾರಣೆ.
- ರಾಜ್ಯ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತ ಸ್ವ ಹಿತಾಸಕ್ತಿ ಅರ್ಜಿ ದಾಖಲು.
- ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಪ್ರಕರಣವನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು.
- ಚಿಕ್ಕಮಗಳೂರು ವಕೀಲನ ಮೇಲೆ ನಡೆದ ಹಲ್ಲೆ ಆರೋಪ ಪ್ರಕರಣವನ್ನು ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡ ನ್ಯಾಯಪೀಠ.
ಇದನ್ನೂ ಓದಿ: ಹಿನ್ನೋಟ: ಸುಪ್ರೀಂ ಕೋರ್ಟ್ ಪ್ರಕಟಿಸಿದ ಪ್ರಮುಖ ತೀರ್ಪುಗಳು ಇಲ್ಲಿವೆ ನೋಡಿ!