ಬೆಂಗಳೂರು: ಆಯುಷ್ಮಾನ್ ಭವ ವಿವಾದದಲ್ಲಿ ನಾನು ಯಾರಿಗೂ ಧಮ್ಕಿ ಹಾಕಿ ಹಣವನ್ನು ಕೇಳಿಲ್ಲ ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಹಿರಿಯ ನಟ ದ್ವಾರಕೀಶ್ ಅವರನ್ನು ಕಂಡರೆ ನನಗೆ ಅಪಾರವಾದ ಗೌರವ ಪ್ರೀತಿ ಇದೆ. ಭಾರತೀಯ ಚಿತ್ರರಂಗದಲ್ಲಿ ದ್ವಾರಕೀಶ್ ಅವರು ಉತ್ತಮ ನಿರ್ಮಾಪಕ, ನಿರ್ದೇಶಕ. ನಿನ್ನೆ ಆಯುಷ್ಮಾನ್ ಭವ ವಿವಾದದಲ್ಲಿ ವಿತರಕ ಜಯಣ್ಣ ನನ್ನ ಹೆಸರು ಪ್ರಸ್ತಾಪಿಸಿದ್ದು, ನನಗೆ ಬೇಸರ ತಂದಿದೆ. ನಾನು ಯಾರಿಗೂ ಧಮ್ಕಿ ಹಾಕಿ, ಹಣವನ್ನು ಕೇಳಿಲ್ಲ. ಜಯಣ್ಣ ನನ್ನ ದುಷ್ಮನ್ ಅಲ್ಲ. ಯೋಗಿ ನನ್ನ ಸಂಬಂಧಿಯಲ್ಲ. ನನಗೆ ಇಬ್ಬರು ಆತ್ಮೀಯರೇ. ಆದರೂ ಈ ವಿವಾದದಲ್ಲಿ ಜಯಣ್ಣ ನನ್ನ ಹೆಸರು ಯಾಕೆ ಪ್ರಸ್ತಾಪ ಮಾಡಿದ್ರು ನನಗೆ ಗೊತ್ತಿಲ್ಲ.
ಯೋಗಿ ದ್ವಾರಕೀಶ್ಗೆ ನಾನು ಸಾಲ ಕೊಡಿಸಿದ್ದು ನಿಜ. ಅವರಿಗೆ ಸಿನಿಮಾ ಅಂದ್ರೆ ಪ್ರಾಣ. ಯೋಗಿ ನನಗೂ ಎರಡು ಕೋಟಿ ಹಣ ನೀಡಬೇಕು. ಆದರೆ, ನಾನು ಇಂದಿಗೂ ಯೋಗಿ ಬಳಿ ಹಣ ಕೇಳಿಲ್ಲ. ಅನುಕೂಲವಾದಾಗ ಕೊಡು ಎಂದು ಹೇಳಿದ್ದೇನೆ. ಆಯುಷ್ಮಾನ್ ಭವ ಸಿನಿಮಾವನ್ನು 9 ಕೋಟಿಗೆ ನಾನು ವಿತರಣೆಗೆ ಕೇಳಿದ್ದೆ. ಆದರೆ, ಯೋಗಿಯೇ ಚಿತ್ರವನ್ನ ರಿಲೀಸ್ ಮಾಡಿದ್ರು. ಸಿನಿಮಾ ನಿರ್ಮಾಣದ ಸಮಯದಲ್ಲಿ 50 ಲಕ್ಷ ಸಾಲ ಕೊಡಿಸಿದ್ದೇನೆ. ಸದ್ಯ ತಾತ್ಕಾಲಿಕವಾಗಿ ಸಮಸ್ಯೆ ಆಗಿರಬಹುದು ಅವರಿಗೆ ಮುಂದಿನ ದಿನಗಳಲ್ಲಿ ಖಂಡಿತ ಹಣವನ್ನು ಕೊಡುತ್ತಾರೆ.
ಆದರೆ, ಈ ಸಮಸ್ಯೆಯಲ್ಲಿ ನನ್ನನ್ನು ಎಳೆದು ತಂದಿದ್ದಾರೆ. ನನಗೂ ಆ ವಿವಾದಕ್ಕೂ ಸಂಬಂಧ ಇಲ್ಲ. ನಡೆಯಬಾರದ್ದು, ನಡೆದುಹೋಗಿದೆ. ಜಯಣ್ಣ ಮತ್ತು ಯೋಗಿ ಕೂತು ಮಾತನಾಡಿಕೊಂಡು ಒಳ್ಳೆಯ ವಾತಾವರಣ ನಿರ್ಮಾಣ ಮಾಡಿಕೊಳ್ಳಲಿ ಎಂದು ಕೇಳಿಕೊಳ್ಳುತ್ತೇನೆ. ಜಯಣ್ಣ ತುಂಬಾ ಒಳ್ಳೆಯವರು, ಯೋಗಿಯು ಕೂಡ ಒಳ್ಳೆಯವರು. ಅಲ್ಲದೆ ದ್ವಾರಕೀಶ್ ಅವರ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಸಿನಿಮಾ ಅಂದ್ರೆ, ಪ್ರಾಪರ್ಟಿ ಮಾರಿಯಾದರೂ ಚಿತ್ರ ಮಾಡುತ್ತಾರೆ. ಈ ವಿವಾದವನ್ನ ಕೂತು ಮಾತನಾಡಿ, ಕ್ಲಿಯರ್ ಮಾಡಿಕೊಳ್ಳಿ ಎಂದು ವಿತರಕ ಜಯಣ್ಣ ಹಾಗೂ ಯೋಗೀಶ್ಗೆ ನಿರ್ಮಾಪಕ ಕೆ.ಮಂಜು ಕಿವಿಮಾತು ಹೇಳಿದರು.