ಬೆಂಗಳೂರು: ಲಾಕ್ಡೌನ್ ಬಳಿಕ ನಗರದ ಕೆರೆಗಳಲ್ಲಿನ ಮಾಲಿನ್ಯತೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳ ಸ್ವಚ್ಛತೆಯನ್ನು ಯಾವ ರೀತಿ ನಿರ್ವಹಿಸಲಾಗುತ್ತದೆ ಎಂಬುದರ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಬಗ್ಗೆ ನೋಟಿಸ್ ಕೂಡ ಜಾರಿ ಮಾಡಿದೆ. ನಗರದ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿ ಪಾತ್ರಗಳಲ್ಲಿ ಇರುವ ಕೈಗಾರಿಕೆಗಳ ಪುನಾರಂಭಕ್ಕೆ ಅನುಮತಿ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಿ.ಆರ್. ಮೋಹನ್, ಲಾಕ್ಡೌನ್ ಬಳಿಕ ನಗರದ ಕೆರೆಗಳು ಶುದ್ಧಗೊಳ್ಳುತ್ತಿದ್ದವು. ಮತ್ತೆ ಈಗ ಕೆರೆಗಳ ಸುತ್ತಮುತ್ತಲಿನ ಕೈಗಾರಿಕೆಗಳು ಪುನಃ ಆರಂಭವಾದರೆ ಕೆರೆಗಳು ಮತ್ತೆ ಮಲಿನಗೊಳ್ಳುತ್ತವೆ. ಹೀಗಾಗಿ ಕಾರ್ಖಾನೆಗಳು ಜಲ ಮೂಲಗಳನ್ನು ಮಲಿನಗೊಳಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳದೆ ಕಾರ್ಯಾರಂಭಕ್ಕೆ ಅನುಮತಿಸಬಾರದು ಎಂದು ಕೋರಿದರು.
ಅರ್ಜಿದಾರರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿತು. ಜೊತೆಗೆ ಲಾಕ್ಡೌನ್ ನಂತರದ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೃಷಭಾವತಿ ನದಿಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಯಾವ ಕ್ರಮಗಳನ್ನು ಅನುಸರಿಸುತ್ತದೆ ಎಂಬುದನ್ನು ಮುಂದಿನ ಕಲಾಪದ ವೇಳೆ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.