ಬೆಂಗಳೂರು: ವಕ್ತಿಯೊಬ್ಬರಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಹಿಂದಿರುಗಿಸದೆ ಚೆಕ್ ಬೌನ್ಸ್ ಆಗಿರುವ ಪ್ರಕರಣದಿಂದ ಬಿ.ಶ್ರೀರಾಮುಲು ಅವರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
ಶ್ರೀರಾಮುಲು ವಿರುದ್ಧದ ಪ್ರಕರಣವನ್ನು ಕೈಬಿಟ್ಟಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರ ಹಾಗೂ ಮೈಸೂರು ನಿವಾಸಿ ಎಲ್.ಸೋಮಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ಇಂದು ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿ, ಆಗಸ್ಟ್ 9ಕ್ಕೆ ಪ್ರಕರಣವನ್ನು ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲ ಎಸ್. ಬಾಲನ್ ವಾದಿಸಿ, 2014ರಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಶ್ರೀರಾಮುಲು ಅವರು ಎಲ್. ಸೋಮಣ್ಣರಿಂದ ಒಟ್ಟು 2,96,70,000 ಕೋಟಿ ರೂಪಾಯಿ ಹಣವನ್ನು ಮೂರು ಕಂತಿನಲ್ಲಿ ಪಡೆದಿದ್ದರು. ಆದರೆ ಈ ಹಣ ವಾಪಸ್ ಮಾಡಿರಲಿಲ್ಲ. ಪ್ರಶ್ನಿಸಿದಾಗ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿಸುವುದಾಗಿ ಇಲ್ಲವೇ ಬಳ್ಳಾರಿ ಲೋಕಸಭೆ ಟಿಕೆಟ್ ಕೊಡಿಸುವುದಾಗಿ ತಿಳಿಸಿದ್ದರು. ಇಲ್ಲದಿದ್ದರೆ ಹಣ ಹಿಂದಿರುಗಿಸುವುದಾಗಿ ತಿಳಿಸಿ ಅದಕ್ಕೆ ಭದ್ರತೆಯಾಗಿ ಚೆಕ್ ನೀಡಿದ್ದರು.
ಅಲ್ಲದೇ, ಅಂತಿಮವಾಗಿ ಹಣ ವಾಪಸ್ಸಾಗದ ಹಿನ್ನೆಲೆಯಲ್ಲಿ ಚೆಕ್ ನ್ನು ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿದೆ. ಹಣ ಕೇಳಿ ಸೋಮಣ್ಣ ಬಳ್ಳಾರಿಗೆ ತೆರಳಿದ್ದ ವೇಳೆ ಶ್ರೀರಾಮಲು ಅವರು ಸೋಮಣ್ಣ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆ ಸೋಮಣ್ಣ ದೂರು ನೀಡಿದ್ದಾರೆ. ದೂರಿನ ತನಿಖೆ ನಡೆಸಿರುವ ಪೊಲೀಸರು ವಂಚನೆ ಆರೋಪದಡಿ ದೋಷಾರೋಪಣೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ನಿರ್ಗಮನದ ವೇಳೆ ಬಿಎಸ್ವೈ ಭರ್ಜರಿ ಗಿಫ್ಟ್: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ
ಬೌನ್ಸ್ ಆಗಿರುವ ಚೆಕ್ ಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬಳ್ಳಾರಿಯ ವಿಚಾರಣಾ ನ್ಯಾಯಾಲಯ, ಶ್ರೀರಾಮುಲು ಅವರನ್ನು 2019ರಲ್ಲಿ ಖುಲಾಸೆಗೊಳಿಸಿ ಆದೇಶಿಸಿದೆ. ಸಾಕ್ಷ್ಯಾಧಾರಗಳಿದ್ದರೂ ರಾಮುಲು ಅವರನ್ನು ಖುಲಾಸೆ ಮಾಡಿರುವುದು ನ್ಯಾಯಸಮ್ಮತವಲ್ಲ ಎಂದು ಬಾಲನ್ ವಿವರಿಸಿದರು. ವಾದ ಪರಿಗಣಿಸಿದ ಪೀಠ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು.