ಬೆಂಗಳೂರು: ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ ತಲುಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಸುಧಾರಿತ “ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ” (Wellness on Wheels)ಕ್ಕೆ ಇಂದು ಚಾಲನೆ ದೊರೆತಿದೆ. ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಆರೋಗ್ಯಸೌಧದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಈ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ಬಸ್ ರಾಜ್ಯಾದ್ಯಂತ ನಿಗದಿತ ದಿನಾಂಕಗಳಂದು ಸಂಚರಿಸಲಿದೆ. ವಾರದಲ್ಲಿ ಐದು ದಿನಗಳ ಕಾಲ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ಬಳಿ ಇರುತ್ತದೆ. ಸಂಚಾರಿ ಕೇಂದ್ರವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಆರೋಗ್ಯ ತಪಾಸಣೆಗೆ ಅಗತ್ಯ ಇಂಟರ್ನೆಟ್ ಸೌಲಭ್ಯ, ರಕ್ತ ಪರೀಕ್ಷೆ ಲ್ಯಾಬ್, ಡಯಾಗೋಸ್ಟಿಕ್ ಲ್ಯಾಬ್, ಒಂದು ಕೆಮಿಕಲ್ ಶೌಚಾಲಯ ಹೊಂದಿದೆ ಮತ್ತು ಆನ್ - ಬೋರ್ಡ್ ವಿದ್ಯುತ್ ಮೂಲಗಳಿಂದ ಸ್ವತಂತ್ರವಾಗಿ ಚಾಲಿತವಾಗಿದೆ ಎಂದರು.

ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ಗ್ರಾಮೀಣ ಪ್ರದೇಶ ಮತ್ತು ನಗರದ ಕೊಳಚೆ ಪ್ರದೇಶಗಳಿಗೆ ತೆರಳಿ ಜನರಿಗೆ ಉಚಿತವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೊಸ ತಂತ್ರಜ್ಞಾನ ಉಪಯೋಗ ಮಾಡಿಕೊಂಡು ರೋಗಗಳು ಬಂದಾಗ ಮುಂಜಾಗ್ರತವಾಗಿಯೇ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಹೃದಯ ಸಂಬಂಧಿತ ಕಾಯಿಲೆಗಳನ್ನು ಪತ್ತೆಹಚ್ಚಲು ಸುಧಾರಿತ ಉಪಕರಣ ಹಾಗೂ ಸೌಲಭ್ಯವನ್ನು ಹೊಂದಿರುತ್ತದೆ. ಹೆಚ್ಚಿನ ವೈದ್ಯಕೀಯ ಸಮಾಲೋಚನೆಯನ್ನು ನಾರಾಯಣ ಹೆಲ್ತ್ ತಜ್ಞ ವೈದ್ಯರೊಂದಿಗೆ Tele ಸಮಾಲೋಚನೆ ಮೂಲಕ ಸ್ಥಳದಲ್ಲಿಯೇ ಚಿಕಿತ್ಸಾ ಸಲಹೆಗಳನ್ನು ನೀಡಿ ಜನರಿಗೆ ಆರೋಗ್ಯ ಸೌಲಭ್ಯವನ್ನು ತ್ವರಿತವಾಗಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಸಿದ್ಧತೆಗಾಗಿ ಸುಮಾರು 2 ಕೋಟಿ ರೂ.ಗಳಾಗಿದ್ದು, ಇದರ ವಾರ್ಷಿಕ ನಿರ್ವಹಣೆಗೆ ಕನಿಷ್ಠ 6,08,070 ಲಕ್ಷ ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ. ಈ ವೆಚ್ಚ ಸಂಪೂರ್ಣವಾಗಿ ವೋಲ್ವೋ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಭರಿಸಿದೆ. ಇದಕ್ಕಾಗಿ ವೋಲ್ವೋ ಕಂಪನಿಗೆ, ಹಾಗೆಯೇ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಮೂಲಕ ಆರೋಗ್ಯ ಸೌಲಭ್ಯಗಳಿಂದ ವಂಚಿತ ಜನರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ನಾರಾಯಣ ಹೆಲ್ತ್ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇಲಾಖೆಯಡಿ ಪ್ರಸ್ತುತ ಖಾಸಗಿ ಸಹಭಾಗಿತ್ವದಲ್ಲಿ ಒಂದು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡುತ್ತಿದ್ದು, ನಮ್ಮ ಸರ್ಕಾರವು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ಮೂಲಕ ಸುಸಜ್ಜಿತ ಆರೋಗ್ಯ ತಪಾಸಣೆ ಸೌಲಭ್ಯಗಳನ್ನು ಕಟ್ಟಕಡೆಯ ಜನರಿಗೂ ತಲುಪಿಸಲು ಬದ್ಧವಾಗಿದೆ. ಜನರ ಆರೋಗ್ಯ ಸುಧಾರಣೆಯೇ ನಮ್ಮ ಧೈಯವಾಗಿದ್ದು, ಖಾಸಗಿ ಕಂಪೆನಿಗಳ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೋಲ್ವೋ ಕಂಪನಿ ಅಧ್ಯಕ್ಷ ಕಮಲ್ ಬಾಲಿ, ನಾರಾಯಣ ಹೆಲ್ತ್ನ ಸಂಸ್ಥಾಪಕರು ಮತ್ತು ಅಧ್ಯಕ್ಷ ಡಾ ದೇವಿ ಶೆಟ್ಟಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಕೆ. ಟಿ. ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿ: ಅವ್ಯವಸ್ಥೆ ಸರಿಪಡಿಸಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧ ಪೂರೈಸಲಾಗುವುದು: ದಿನೇಶ್ ಗುಂಡೂರಾವ್