ಬೆಂಗಳೂರು: ಚುನಾವಣಾ ನಾಮಪತ್ರದಲ್ಲಿ ಆಸ್ತಿ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಸಮನ್ಸ್ ಸ್ವೀಕರಿಸಿದ್ದು, ಪತ್ರಿಕೆ ಜಾಹೀರಾತು ಮೂಲಕ ಹೊರಡಿಸಿದ ಸಮನ್ಸ್ಗೆ ವಕೀಲರ ಮೂಲಕ ಉತ್ತರಿಸಲು ನಿರ್ಧರಿಸಿದ್ದಾರೆ.
ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ಇಂದು ಏಕಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಕೇಶವ ರೆಡ್ಡಿ ಹಾಜರಾಗಿ, ಹೈಕೋರ್ಟ್ ಹೊರಡಿಸಿದ ಪೇಪರ್ ಪಬ್ಲಿಕೇಷನ್ ಸಿಕ್ಕಿದೆ. ಹೀಗಾಗಿ ವಕಾಲತ್ತು ವಹಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಲಯ ಸೆ. 30ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಪ್ರಕರಣದ ಹಿನ್ನೆಲೆ:
ಕಳೆದ ಲೋಕಾಸಭಾ ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿಯಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಮತ್ತು ವಕೀಲ ದೇವರಾಜೇಗೌಡ ಹೈಕೊರ್ಟ್ನಲ್ಲಿ ಅರ್ಜಿ ಹಾಕಿದ್ದರು. ಈ ಸಂಬಂಧ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿತ್ತು. ಆದರೆ ಮೂರು ಬಾರಿಯೂ ಪ್ರಜ್ವಲ್ ರೇವಣ್ಣಗೆ ನೋಟಿಸ್ ತಲುಪಿರಲಿಲ್ಲ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಫಿಡವಿಟ್ನಲ್ಲಿನ ವಿಳಾಸದಲ್ಲಿ ಅವರಿಲ್ಲವೆಂಬ ಉತ್ತರ ಕೇಳಿ ಬಂದಿತ್ತು.
ಕೋರ್ಟ್ ಅಮೀನರು ಮತ್ತು ಹಾಸನ ಜಿಲ್ಲಾ ನ್ಯಾಯಾಧೀಶರ ಮೂಲಕ ತಲುಪಿಸುವ ಪ್ರಯತ್ನ ಕೂಡ ವಿಫಲವಾಗಿತ್ತು ಎಂದು ಈ ಬಗ್ಗೆ ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಸೆ. 3ರಂದು ಕೋರ್ಟ್ ಗಮನಕ್ಕೆ ತಂದಿದ್ದರು. ಅಲ್ಲದೇ ನೋಟಿಸ್ ಪ್ರತಿಯನ್ನು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲು ಮನವಿ ಮಾಡಿದ್ದರು. ಅದಕ್ಕೆ ಸೆ. 6ರಂದು ಹೈಕೋರ್ಟ್ ಅನುಮತಿ ನೀಡಿತ್ತು.