ಬೆಂಗಳೂರು: ಕಳೆದ 37 ವರ್ಷಗಳಿಂದ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುವ ಜಯನಗರದ ಶ್ರೀವಿನಾಯಕ ಮಿತ್ರಮಂಡಳಿ, ಈ ವರ್ಷವೂ ಬಹಳ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸುವುದರ ಜೊತೆಗೆ ಪರಿಸರ ಕಾಳಜಿ ತೋರಿದ್ದಾರೆ.
ಗಣೇಶ ಹಬ್ಬ ಬಂದ್ರೆ ಸಾಕು ಪ್ರತಿ ಏರಿಯಾಗಳಲ್ಲೂ ಗಣಪನನ್ನು ಕೂರಿಸಿ ಬಿಬಿಎಂಪಿ ನಿಗದಿ ಪಡಿಸುವ ಕಡೆ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡುತ್ತಾರೆ. ಇದರಿಂದ ಕೆರೆಗಳ ನೀರು ಮಲಿನವಾಗುತ್ತದೆ. ಅಲ್ಲದೆ ಜಲಚರಗಳಿಗೂ ಕಂಟಕ ಉಂಟಾಗುತ್ತದೆ. ಆದರೆ, ಜಯನಗರದ 8ನೇ ಬ್ಲಾಕಿನ ಶ್ರೀವಿನಾಯಕ ಮಿತ್ರಮಂಡಳಿ ಅದ್ದೂರಿಯಾಗಿ ಗಣೇಶ ಉತ್ಸವವನ್ನು ಆಚರಿಸಿದ್ದರೂ ಪರಿಸರ ಹಾಳಾಗದ ರೀತಿ ಕ್ರಮ ವಹಿಸಿದ್ದಾರೆ.
ಸುಮಾರು ಆರು ಅಡಿ ಪರಿಸರ ಸ್ನೇಹಿ ಬಣ್ಣ ಬಳಸಿದ ಗಣೇಶನನ್ನು ಕೂರಿಸಿ. ಜಯನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಇಂದು ಟಿಪ್ಪರ್ ನಲ್ಲಿ ಗಣೇಶನನ್ನು ನಿಮಜ್ಜನ ಮಾಡಿದ್ದಾರೆ. ಅಲ್ಲದೆ ಸುಮಾರು ನಾಲ್ಕು ವರ್ಷಗಳಿಂದಲೂ ವಿನಾಯಕ ಮಿತ್ರ ಮಂಡಳಿ ಗಣೇಶ ಮೂರ್ತಿಯನ್ನು ಟಿಪ್ಪರ್ ನಲ್ಲಿ ನಿಮಜ್ಜನ ಮಾಡುತ್ತ ಬಂದಿದ್ದು, ಆ ನೀರನ್ನು ಮತ್ತೆ ಹತ್ತಿರದ ಫಾರ್ಮ್ ಹೌಸ್ ನಲ್ಲಿ ಗಿಡಗಳಿಗೆ ಹಾಯಿಸುವ ಮೂಲಕ ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು ಇತರರಿಗೆ ಮಾದರಿಯಾಗುವಂತಿದೆ.