ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಅವರ ಧರ್ಮಪತ್ನಿ ಉಷಾ ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗೋಪೂಜೆ ನೆರವೇರಿಸಿದರು.
ಪ್ರತಿವರ್ಷ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದ ಡಿಕೆಶಿ, ಈ ಬಾರಿ ಕೊರೊನಾ ನಿಯಮಾವಳಿ ಜಾರಿಯಲ್ಲಿರುವ ಹಿನ್ನೆಲೆ ಕುಟುಂಬ ಸದಸ್ಯರ ಜೊತೆಗೆ ಅತ್ಯಂತ ಸರಳವಾಗಿ ಹಬ್ಬವನ್ನು ಆಚರಿಸಿದರು. ಪ್ರತಿವರ್ಷ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಹಬ್ಬವನ್ನು ಆಚರಿಸುತ್ತಾ ಬಂದಿರುವ ಅವರು, ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ಸಂಕ್ರಾಂತಿ ಆಚರಣೆ ಮಾಡಿದ್ದಾರೆ.
ಓದಿ:ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದ ಸಚಿವ ಉಮೇಶ್ ಕತ್ತಿ
ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಶಿವಕುಮಾರ್ ಪತ್ನಿ ಉಷಾ ಅವರು ಸಾಂಪ್ರದಾಯಿಕ ಪೂಜಾ ವಿಧಿ ವಿಧಾನವನ್ನು ನೆರವೇರಿಸುವ ಮೂಲಕ ಪೂಜೆ ಮಾಡಿದರು. ಸಾಮಾನ್ಯವಾಗಿ ನಿವಾಸದಲ್ಲಿ ನಿತ್ಯ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗುತ್ತಿದ್ದ ಶಿವಕುಮಾರ್ ಇಂದು ಅಂತಹ ಯಾವುದೇ ಪ್ರೀತಿಯ ಸಭೆ ಅಥವಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ. ಮಧ್ಯಾಹ್ನ ಹಬ್ಬದೂಟವನ್ನು ಸವಿದು ನಂತರ ಕೆಪಿಸಿಸಿ ಕಚೇರಿಗೆ ಆಗಮಿಸಿದ ಡಿಕೆಶಿ ಮಾಧ್ಯಮಗೋಷ್ಟಿ ನಡೆಸಿದರು.