ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಯಿಂದ ಪಶ್ಚಿಮಘಟ್ಟದ ನಾಗರಿಕರ ಬದುಕು ಬೀದಿಗೆ ಬರಲಿದೆ ಎಂಬ ವಿಚಾರವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
![dinesh gundurao latest tweet](https://etvbharatimages.akamaized.net/etvbharat/prod-images/9095146_vvvv.jpg)
ಈ ಕುರಿತು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕಸ್ತೂರಿ ರಂಗನ್ ವರದಿ ಅತ್ಯಂತ ಸೂಕ್ಷ್ಮ ವಿಚಾರ. ಈ ವರದಿ ಅನುಷ್ಠಾನಗೊಂಡರೆ ಪಶ್ಚಿಮ ಘಟ್ಟದ ಬಹುತೇಕರ ಬದುಕು ಬೀದಿಗೆ ಬರಲಿದೆ. ನಮ್ಮ ಸರ್ಕಾರವಿದ್ದಾಗಲೂ ವರದಿ ಜಾರಿಗೆ ಒತ್ತಡ ಬಂದಿತ್ತು. ಆದರೆ ಕೆಲ ಲೋಪಗಳ ಆಧಾರದಲ್ಲಿ ನಾವು ಅದಕ್ಕೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ರಾಜ್ಯ ತನ್ನ ನಿಲುವನ್ನು ಕೇಂದ್ರಕ್ಕೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.
![dinesh gundurao latest tweet](https://etvbharatimages.akamaized.net/etvbharat/prod-images/9095146_bbng.jpg)
ಗಾಡ್ಗೀಳ್ ವರದಿಯ ಲೋಪ ಸರಿದೂಗಿಸಲು ಕಸ್ತೂರಿ ರಂಗನ್ ವರದಿ ಮೊರೆ ಹೋಗಲಾಯ್ತು. ಇದು ಪಶ್ಚಿಮ ಘಟ್ಟದ ಜನರನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ. ವರದಿಯ 'ಎಕೋ ಸೆನ್ಸಿಟಿವ್ ಏರಿಯಾ' ಗಳನ್ನು ಗುರುತಿಸಿರುವ ಬಗ್ಗೆ ಅಪಸ್ವರಗಳಿದೆ. ಅವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲಾಗಿದೆ ಎಂಬ ಆರೋಪವಿದೆ ಎಂದಿದ್ದಾರೆ.
![dinesh gundurao latest tweet](https://etvbharatimages.akamaized.net/etvbharat/prod-images/9095146_bng.jpg)
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಶ್ಚಿಮ ಘಟ್ಟಗಳ ರಕ್ಷಣೆ ಅತ್ಯಗತ್ಯ. ಆದರೂ ಕಾಡೊಳಗೆ ಬದುಕು ಕಟ್ಟಿಕೊಂಡವರ ಹಿತ ಕಾಯುವುದು ಅಷ್ಟೇ ಮುಖ್ಯ. ಕೃಷಿ ಭೂಮಿಯನ್ನು ಕೂಡ 'ಎಕೋ ಸೆನ್ಸಿಟಿವ್ ಏರಿಯಾ' ಎಂದು ಗುರುತಿಸಿರುವುದು ಈ ವರದಿಯ ಅತಿ ದೊಡ್ಡ ಲೋಪ. ಮೊದಲು ಈ ವರದಿಯ ಅವೈಜ್ಞಾನಿಕ ಸಮೀಕ್ಷೆಯ ಗೊಂದಲ ಪರಿಹಾರವಾಗಬೇಕಿದೆ ಎಂದಿದ್ದಾರೆ.