ಬೆಂಗಳೂರು: ಉಪ ಚುನಾವಣೆಗೆ ಕಾಂಗ್ರೆಸ್ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಇನ್ನೂ ಕೆಲ ನಾಯಕರು ಒಂದೆರಡು ದಿನದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರೆಲ್ಲರೂ ಒಟ್ಟಾಗಿದ್ದೇವೆ. ನಾಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಆಗಮಿಸುತ್ತಿದ್ದು, ಅವರೊಂದಿಗೆ ಇನ್ನೊಂದು ಸುತ್ತಿನ ಸಭೆ ನಡೆಸಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ ಎಂದರು.
24ರ ನಂತರ ಡಿಕೆಶಿ ಪ್ರಚಾರ ಮಾಡ್ತಾರೆ. ಕೆ.ಹೆಚ್.ಮುನಿಯಪ್ಪ ಕೂಡ ಡೇಟ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಎಲ್ಲ ನಾಯಕರು ಪ್ರಚಾರದಲ್ಲಿ ಭಾಗವಹಿಸ್ತಾರೆ. ಯಾವುದೇ ಭಿನ್ನಮತವಿಲ್ಲ. ಕೆ.ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ , ಹೀಗೆ ಹಿರಿಯರು ಎಲ್ಲ ಕಡೆ ಪ್ರವಾಸ ಮಾಡಿ ಪ್ರಚಾರಕ್ಕೆ ಮುಂದಾಗುತ್ತೇವೆ. ಈ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಎಐಸಿಸಿ ವೀಕ್ಷಕರು ಕೂಡ ಇರುತ್ತಾರೆ. ವೇಣುಗೋಪಾಲ್ ಕೂಡ ಬರುತ್ತಾರೆ ಎಂದರು.
ಜವಾಬ್ದಾರಿ ಅರಿತು ಮಾತನಾಡಲಿ:
ಕಾಂಗ್ರೆಸ್ ನಾಯಕರಿಗೆ ಸಾಲ ನೀಡಿದ್ದೆ ಎಂಬ ಎಂಟಿಬಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್, ಸಾಲ ಕೊಟ್ಟಿರುವ ಬಗ್ಗೆ ಅಫಿಡವಿಟ್ ನಲ್ಲಿ ತಿಳಿಸಿದ್ದಾರಾ? ಹಣ ಇದೆ ಅಂತ ಇಲ್ಲ ಸಲ್ಲದ ಹೇಳಿಕೆ ನೀಡಬಾರದು. ಶ್ರೀಮಂತ ಅಂತ ಹೇಳಿದರೆ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಇದೆಲ್ಲ ಗಮನದಲ್ಲಿಟ್ಟುಕೊಂಡು ಮಾತನಾಡಲಿ. ಹತಾಶರಾಗಿ ನೀವು ಇಲ್ಲಸಲ್ಲದ ಹೇಳಿಕೆ ನೀಡಬೇಡಿ. ಅವರು ಚುನಾವಣಾ ಕಣದಲ್ಲಿ ಇದ್ದಾರೆ, ಹೀಗೆ ಹೇಳಿಕೆ ಕೊಡಬಾರದು ಎಂದರು.