ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಯುವಕ ಅನಿಲ್ ಇಂಗಳಗಿ ಹತ್ಯೆಯಾಗಿರುವುದು ದುರದೃಷ್ಟಕರ ಸಂಗತಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿಗೆ ಉಪಮುಖ್ಯಮಂತ್ರಿ ಗೋವಿಂದ್.ಎಂ ಕಾರಜೋಳ ಸೂಚಿಸಿದ್ದಾರೆ.
ಹತ್ಯೆಗೊಳಗಾಗಿರುವ ಯುವಕನ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಬೇಕು. ಪರಿಹಾರ ಧನ ಒದಗಿಸಬೇಕು. ಗ್ರಾಮದಲ್ಲಿ ಶಾಂತಿ, ಸಾಮಾಜಿಕ ಸಾಮರಸ್ಯ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಡಿಸಿಎಂ ನಿರ್ದೇಶಿಸಿದ್ದಾರೆ.
ಬೂದಿಹಾಳ ಪಿ.ಹೆಚ್.ಗ್ರಾಮದಲ್ಲಿ ಅನಿಲ್ ಇಂಗಳಗಿ(25) ಎಂಬ ಯುವಕನನ್ನು ದುರ್ಷ್ಕಮಿಗಳು ಗುರುವಾರ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತ ಯುವಕ ಅನಿಲ್ ಇಂಗಳಗಿ ನಾಲ್ಕು ದಿನಗಳ ಹಿಂದೆ ಗ್ರಾಮದ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ. ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವಾಜ್ ಹಾಕಿದ್ದರು ಎಂದು ಹೇಳಲಾಗ್ತಿದೆ.