ಬೆಂಗಳೂರು: ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಅವರಿಂದ ಸಮಗ್ರ ಮಾಹಿತಿ ಪಡೆದೆ. ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ ಹಾಗು ಬಿಎಂಆರ್ಸಿಎಲ್ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಒಂದು ಕಡೆಯಿಂದ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರು ರೌಂಡ್ಸ್ ಬಳಿಕ ಕೆ.ಆರ್.ಪುರಂನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೆಬ್ಬಾಳದಿಂದ ಪರಿಶೀಲನೆ ಆರಂಭಿಸಿದ್ದೇವೆ. ಅಧಿಕಾರಿಗಳು ಕೆಲವು ಪ್ರಸ್ತಾವನೆ ಸಲ್ಲಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚೆ ಮಾಡುತ್ತೇನೆ. ಬಿಡಿಎ ಹಾಗೂ ಪಾಲಿಕೆ ಕಡೆಯಿಂದಲೂ ಕೆಲವು ಪ್ರಸ್ತಾವನೆಗಳು ಬಂದಿವೆ. ಎಲ್ಲೂ ಜನರಿಂದ ಆಸ್ತಿ ವಶಕ್ಕೆ ಪಡೆಯದೇ ಎಷ್ಟು ಕೆಲಸ ಮಾಡಬಹುದು ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದರು.
![DCM DK Shivakumar Bengaluru City Rounds With Officers](https://etvbharatimages.akamaized.net/etvbharat/prod-images/kn-bng-03-dks-city-rounds-script-7208077_13062023165434_1306f_1686655474_648.jpg)
ಹೆಬ್ಬಾಳ ಹಾಗೂ ಕೆ.ಆರ್. ಪುರಂ ಪ್ರಮುಖ ಕೇಂದ್ರಗಳಾಗಿದ್ದು ಎಲ್ಲೆಲ್ಲಿ ಸುರಂಗ ಮಾರ್ಗ ಮಾಡಲು ಸಾಧ್ಯ? ಎಂದು ಹೇಳಿದ್ದೇವೆ. ಅಲ್ಪದೂರದ ಫ್ಲೈ ಓವರ್ ಜೊತೆಗೆ ಮುಂದಿನ 25 ವರ್ಷಗಳ ದೂರದೃಷ್ಟಿಯಿಂದ ಬಹುದೂರದ ಫ್ಲೈ ಓವರ್ ಕುರಿತು ಚರ್ಚೆ ಮಾಡಲಾಗಿದೆ. ಈ ವಿಚಾರವಾಗಿ ಎರಡು ಸಭೆ ನಡೆಸುತ್ತೇನೆ. ಬೆಂಗಳೂರಿನ ನಾಗರಿಕರ ಜೊತೆ ಒಂದು ಸಭೆ, ಬೆಂಗಳೂರಿನ ಬಗ್ಗೆ ಕಾಳಜಿ ಹಾಗು ದೂರದೃಷ್ಟಿ ಹೊಂದಿರುವವರ ತಜ್ಞರ ಜೊತೆ ಒಂದು ಸಭೆ ಮಾಡಿ ಸಮಾಲೋಚನೆ ನಡೆಸುತ್ತೇನೆ. ಮುಂದಿನ 10- 15 ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕಾಲುವೆಗಳ ಹೂಳು ಎತ್ತಿದ ನಂತರ ಆ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ. ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಅಡೆತಡೆ ಹಾಗೂ ಬಿಎಂಆರ್ಸಿಎಲ್ ವಿರೋಧ ಇದೆಯೇ ಎಂಬ ಪ್ರಶ್ನೆಗೆ, "ಯಾರ ವಿರೋಧವೂ ಇಲ್ಲ. ನಾನು ಎಲ್ಲ ಸಂಸ್ಥೆಗಳ ಅಧಿಕಾರಿಗಳ ಜತೆಗೆ ಪರಿಶೀಲನೆ ಮಾಡುತ್ತಿದ್ದೇವೆ. ಗುಣಮಟ್ಟದ ಕೆಲಸ ಆಗಬೇಕು ಅದೇ ನಮ್ಮ ಗುರಿ" ಎಂದು ತಿಳಿಸಿದರು.
![DCM DK Shivakumar Bengaluru City Rounds With Officers](https://etvbharatimages.akamaized.net/etvbharat/prod-images/kn-bng-03-dks-city-rounds-script-7208077_13062023165434_1306f_1686655474_1062.jpg)
ಹೆಬ್ಬಾಳ ಮೇಲ್ಸೇತುವೆ ಮರು ವಿನ್ಯಾಸಕ್ಕೆ ಬಿಡಿಎ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ಪೂಜೆ ಮಾಡಿದ್ದು, ಅದೇ ವಿನ್ಯಾಸ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ, "ನಾವು ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ತಾಂತ್ರಿಕವಾಗಿ, ಅನುಕೂಲಕರವಾಗಿ, ಉತ್ತಮವಾಗಿ ಇದ್ದರೆ ನಾವು ಅದನ್ನು ಮುಂದುವರಿಸುತ್ತೇವೆ. ನಾವು ಎಲ್ಲರ ಸಲಹೆ ಕೇಳುತ್ತೇವೆ" ಎಂದು ಹೇಳಿದರು.
ಹೆಬ್ಬಾಳದಲ್ಲಿ ಕಾಮಗಾರಿ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚುವ ಬಗ್ಗೆ ಕೇಳಿದಾಗ, "ಮೆಟ್ರೋ ಕಾಮಗಾರಿ ಕೇವಲ ರಾತ್ರಿ ವೇಳೆ ಕೆಲಸ ಮಾಡಲಾಗುತ್ತಿದೆ. ಕಾಮಗಾರಿಗಳು ಬೇಗ ನಡೆಯುವಂತೆ ಅನುವು ಮಾಡಿಕೊಡಲು ಪೊಲೀಸ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಲಾಗುತ್ತಿದೆ. ಒಂದು ನಿಮಿಷವೂ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಲ್ಲಿಸಲ್ಲ. ಹೆಬ್ಬಾಳ ಫ್ಲೈ ಓವರ್ ಮೇಲೆ, ಕೆಳಗೆ ಟ್ರಾಫಿಕ್ ಜಾಮ್ ಮಾಡದಂತೆ ಕಾಮಗಾರಿ ಮಾಡ್ತೇವೆ. ಮೆಟ್ರೋ ಕಾಮಗಾರಿ ಆರಂಭವಾದ್ರೂ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ತೇವೆ" ಎಂದು ತಿಳಿಸಿದರು.
![DCM DK Shivakumar Bengaluru City Rounds With Officers](https://etvbharatimages.akamaized.net/etvbharat/prod-images/kn-bng-03-dks-city-rounds-script-7208077_13062023165434_1306f_1686655474_864.jpg)
ಡಿಕೆಶಿ ಸಾಕ್ಷಾತ್ ದರ್ಶನ: ಇದಕ್ಕೂ ಮುನ್ನ ಮಹಾನಗರದ ಹೊರವರ್ತಲ ರಸ್ತೆಯ ಸಂಚಾರದಟ್ಟಣೆಯನ್ನು ಡಿಕೆಶಿ ಸಾಕ್ಷಾತ್ ದರ್ಶನ ಮಾಡಿದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ್ ನಾಯಕ್, ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಮೊದಲು ಹೆಬ್ಬಾಳ ಜಂಕ್ಷನ್ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು. ಈ ವೇಳೆ ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ 2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ವಿವರಣೆ ನೀಡಿದರು. 63 ಕಿ.ಮೀ. ಅವಳಿ ಸುರಂಗಮಾರ್ಗ ನಿರ್ಮಾಣದ ಬಗ್ಗೆಯೂ ಸಲಹೆ ನೀಡಿದರು.
![DCM DK Shivakumar Bengaluru City Rounds With Officers](https://etvbharatimages.akamaized.net/etvbharat/prod-images/kn-bng-03-dks-city-rounds-script-7208077_13062023165434_1306f_1686655474_1026.jpg)
ಹಣೆ ಚಚ್ಚಿಕೊಂಡ ಸಚಿವ ಡಿಕೆಶಿ: ಪೌರಕಾರ್ಮಿಕರ ಜೊತೆ ಸಮಾಲೋಚನೆಗೆ ಮುಂದಾದ ಡಿಕೆಶಿ ತಮ್ಮ ಸಮಸ್ಯೆಗಳನ್ನು ಹೇಳಿ ಎಂದು ಸೂಚಿಸಿದಾಗ ಪೌರಕಾರ್ಮಿಕ ತೆಲುಗು ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಯಾಕೆ ನಿಮಗೆ ಕನ್ನಡ ಬರಲ್ವಾ ಎಂದು ಕೇಳಿದಾಗ ಇಲ್ಲ ಎಂದು ತಲೆ ಆಡಿಸಿದ್ದರು. ಈ ಸಂದರ್ಭದಲ್ಲಿ ಹಣೆ ಚಚ್ಚಿಕೊಂಡ, ಆದಷ್ಟು ಬೇಗ ಕನ್ನಡ ಕಲಿಯಿರಿ ಎಂದು ಸಲಹೆ ನೀಡಿದರು. ನಂತರ ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಟೆಲಿಕಾಂ ಲೇಔಟ್ಗೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಮಳೆ ಬಂದಾಗಲೆಲ್ಲ ಜಲಾವೃತವಾಗ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ, ತಡೆಗೋಡೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದರ ಪರಿಶೀಲನೆ ನಡೆಸಲಾಯಿತು. ನಂತರ ಹೊರ ವರ್ತುಲ ರಸ್ತೆ, ಕಲ್ಯಾಣ ನಗರ, ಹೆಚ್ಆರ್ಬಿಆರ್ ಲೇಔಟ್ಗೆ ಭೇಟಿ ನೀಡಿ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ನಂತರ ಕೆ.ಆರ್.ಪುರಂಗೆ ಭೇಟಿ ನೀಡಿ ಬಿಎಂಆರ್ಸಿಎಲ್ ನಡೆಸುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಿದರು.
![DCM DK Shivakumar Bengaluru City Rounds With Officers](https://etvbharatimages.akamaized.net/etvbharat/prod-images/kn-bng-03-dks-city-rounds-script-7208077_13062023165434_1306f_1686655474_776.jpg)
ಕಾಮಗಾರಿ ಪರಿಶೀಲನೆ ವೇಳೆ ಮಹಿಳಾ ಪೌರ ಕಾರ್ಮಿಕರು ನಮಗೆ ಸ್ಥಳೀಯ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಇಲ್ಲ, ಹೀಗಾಗಿ ಪೌರ ಕಾರ್ಮಿಕ ಗುರುತಿನ ಚೀಟಿಗೆ ಉಚಿತ ಟಿಕೆಟ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಯಾವುದೇ ಕರೆಂಟ್ ಬಿಲ್ ಹೆಚ್ಚಳ ಮಾಡಿಲ್ಲ ಎಂಬ ಮಾಜಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಬೊಮ್ಮಾಯಿ ಅವರು ದುಃಖದಲ್ಲಿ ಮಾತನಾಡಿದ್ದಾರೆ. ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ. ರೇಟು, ದಾಖಲೆಗಳು ಎಲ್ಲವೂ ನಮ್ಮ ಬಳಿ ಇದೆ. ನಾವು ಎಲ್ಲ ದಾಖಲೆಗಳನ್ನು ಕೊಡುತ್ತೇವೆ" ಎಂದು ತಿರುಗೇಟು ನೀಡಿದರು.