ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಾಳೆ ಬೆಂಗಳೂರು ನಗರ ವ್ಯಾಪ್ತಿಯ ಸಚಿವರು, ಶಾಸಕರ ಸಭೆ ನಡೆಯಲಿದ್ದು, ಇದರಲ್ಲಿ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಲಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಲ್ಲದೇ ಇದಕ್ಕೂ ಮುಂಚಿನಿಂದಲೇ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಕೂಡ ಲಾಕ್ಡೌನ್ನಿಂದ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಪ್ರತಿಪಾದಿಸಿದ್ದು, ನಾಳಿನ ಸಭೆಯಲ್ಲಿ ಸಹ ಇದನ್ನೇ ಪುನರುಚ್ಚರಿಸಲಿದ್ದಾರೆ.
ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಸಹ ಇನ್ನೊಮ್ಮೆ ಈ ವಿಚಾರ ಸ್ಪಷ್ಟಪಡಿಸಿದ್ದು, ನಾವು ಲಾಕ್ಡೌನ್ ವಿರೋಧಿಸುತ್ತೇವೆ. ನಮ್ಮ ಸದಸ್ಯರು ಪಾಲ್ಗೊಳ್ಳಲಿದ್ದು, ಅಭಿಪ್ರಾಯ ತಿಳಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದ್ದರು. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಕೊರೊನಾ ಬಂದು ಆಸ್ಪತ್ರೆ ಸೇರಿದ್ದಾರೆ.
ಈ ಹಿನ್ನೆಲೆ ಸರ್ವಪಕ್ಷ ಸಭೆ ನಡೆಯುವ ಬದಲು ಸದ್ಯ ಕೊರೊನಾ ಉಲ್ಬಣಗೊಂಡಿರುವ ರಾಜ್ಯ ರಾಜಧಾನಿಯ ಶಾಸಕರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವ ಸಿಎಂ ಬಿಎಸ್ವೈ, ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಸಮಾಲೋಚಿಸಿ ಸದ್ಯ ನಗರದ ಶಾಸಕರ ಜತೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ನಾಳೆ ಸಭೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ ಎಂದಿದ್ದಾರೆ.
ಕಳೆದ ವರ್ಷ ಕೊರೊನಾ ಆರಂಭದ ಸಂದರ್ಭದಲ್ಲಿ ಅರಿವಿನ ಕೊರತೆಯಿಂದಾಗಿ ಸಾಕಷ್ಟು ಸುರಕ್ಷತಾ ಕಾರ್ಯಕ್ರಮಗಳನ್ನು ಸಕಾಲಕ್ಕೆ ಕೈಗೊಳ್ಳಲಾಗದ ರಾಜ್ಯ ಸರ್ಕಾರ ಈ ಸಾರಿ ಎಲ್ಲಾ ಅರಿವಿದ್ದೂ ಮತ್ತೆ ಎಡವಿದೆ. ಸೂಕ್ತ ಚಿಕಿತ್ಸೆ ಸಿಗದೇ ನಿತ್ಯ ಹತ್ತಾರು ಮಂದಿ ಬಲಿಯಾಗುತ್ತಿದ್ದಾರೆ. ಸರಿಯಾದ ವ್ಯವಸ್ಥೆ, ವೈದ್ಯಕೀಯ ಸೇವೆ, ಸಕಾಲಕ್ಕೆ ಆಂಬುಲೆನ್ಸ್ ವ್ಯವಸ್ಥೆ, ಸೂಕ್ತ ಚಿಕಿತ್ಸಾ ಪರಿಕರಗಳನ್ನು ಕೊಳ್ಳುವಲ್ಲಿ ಮಾಡುತ್ತಿರುವ ವಿಳಂಬ, ಸರ್ಕಾರದ ನಿರ್ಲಕ್ಷ್ಯ ಹಿನ್ನೆಲೆ ನಿತ್ಯ ಸಾವಿನ ಸಂಖ್ಯೆ ನಗರದಲ್ಲಿಯೇ 100 ಗಡಿ ತಲುಪುತ್ತಿದೆ.
ಅದಾಗಲೇ 12 ಸಾವಿರಕ್ಕೂ ಹೆಚ್ಚು ಮಂದಿ ನಿತ್ಯ ಕೊರೊನಾ ಪಾಸಿಟಿವ್ಗೆ ಗುರಿಯಾಗುತ್ತಿದ್ದಾರೆ. ಈ ಎಲ್ಲಾ ವಿಷಯ ಮುಂದಿಟ್ಟುಕೊಂಡು ಸರ್ಕಾರಕ್ಕೆ ಚುರುಕು ಮುಟ್ಟಿಸುವ ಹಾಗೂ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಅಲ್ಲದೆ ನಾಳಿನ ಸಭೆಯಲ್ಲಿಯೂ ಪಕ್ಷದ ರಾಜ್ಯ ನಾಯಕರ ಸೂಚನೆ ಮೇರೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಉತ್ತರ ಕೇಳಲು ತೀರ್ಮಾನಿಸಿದೆ.
ಒಟ್ಟಾರೆ ತಮ್ಮ ಸಹಕಾರ ಸರ್ಕಾರಕ್ಕೆ ಇದೆ ಎಂದು ಹೇಳಿಕೊಂಡಿದ್ದರೂ, ಅದನ್ನು ಈ ಸಾರಿ ಶಿಸ್ತುಬದ್ಧವಾಗಿ, ಷರತ್ತುಗಳನ್ನು ಮುಂದಿಟ್ಟು ನೀಡಲು ತೀರ್ಮಾನಿಸಿದೆ. ಮುಂಬರುವ ದಿನಗಳಲ್ಲಿ ಮಹಾನಗರದ ಜನತೆಯ ಸೌಖ್ಯವನ್ನು ಉದ್ದೇಶವಾಗಿಟ್ಟುಕೊಂಡು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲು, ತಮ್ಮ ಅಭಿಪ್ರಾಯ ಮುಂದಿಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ನಾಳೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಸಲಹೆಯನ್ನು ಸರ್ಕಾರ ಸ್ವೀಕರಿಸಲಿದೆ ಎನ್ನುವ ವಿಶ್ವಾಸವನ್ನು ನಾಯಕರು ಹೊಂದಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.