ಬೆಂಗಳೂರು: ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿರುವ ಸಿಎಂ ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ. ಇಂದು ಬೆಳಗ್ಗೆ ಮನೆಯಿಂದ ಪೇಪರ್ ಹಾಗೂ ಕೆಲ ಉಡುಪುಗಳನ್ನು ತರಿಸಿಕೊಂಡ ಸಿಎಂ ಬೆಳಗ್ಗೆ ಲವಲವಿಕೆಯಿಂದಲೇ ಪೇಪರ್ ಓದಿ ಕಾಫಿ ಸೇವಿಸಿದ್ದಾರಂತೆ.
ಇಂದಿಗೆ ಸಿಎಂ ಆಸ್ಪತ್ರೆಗೆ ದಾಖಲಾಗಿ ಎರಡನೇ ದಿನವಾಗಿದ್ದು, ಮಣಿಪಾಲ್ ಆಸ್ಪತ್ರೆ ವೈದ್ಯರು ಸಿಎಂ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಡಾ. ಸುದರ್ಶನ್ ಬಲ್ಲಾಳ್ ನೇತೃತ್ವದ ತಂಡದಿಂದ ಸಿಎಂ ಆರೋಗ್ಯ ಸ್ಥಿತಿ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಈಗಾಗಲೇ ವೈದ್ಯರು ಬಿಎಸ್ವೈ ಅವರನ್ನು ಬಿಪಿ, ಶುಗರ್, ರಕ್ತ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಯಲ್ಲಿ ಎಲ್ಲವೂ ಕೂಡ ನಾರ್ಮಲ್ ಆಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶ್ವಾಸಕೋಶಕ್ಕೆ ಸೋಂಕು ತಗಲುವ ಸಾಧ್ಯತೆ ಹಿನ್ನೆಲೆ ಶ್ವಾಸಕೋಶ ಸಂಬಂಧ ಎಕ್ಸ್ ರೇ ಮಾಡಿದ್ದಾರೆ. ಸಿಎಂಗೆ ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಮೊಮ್ಮಗಳಿಗೂ ವಕ್ಕರಿಸಿದ ಕೊರೊನಾ: ಸಿಎಂ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಮತ್ತು ಅವರ ಪತಿ ಡಾ.ನಿರಂಜನ್ ಅವರಿಗೂ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಇಬ್ಬರೂ ಸಿಎಂಗೆ ಪಾಸಿಟಿವ್ ಆಗುವ ಒಂದು ದಿನ ಮೊದಲು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಹಾಗೂ ಅವರ ಮೊಮ್ಮಗಳು ಮತ್ತು ಮೊಮ್ಮಗಳ ಪತಿ ಅಕ್ಕಪಕ್ಕದ ವಾರ್ಡ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಿಎಂಗೆ ತಗುಲಿದ ಕೊರೊನಾ ಸೋಂಕು; ಮಣಿಪಾಲ್ ಆಸ್ಪತ್ರೆಗೆ ದಾಖಲು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿನ್ನೆ ಎರಡನೇ ಬಾರಿ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಅವರು ಇಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ನಂತರವೂ ಸಿಎಂ ಬಿಎಸ್ವೈಗೆ ಸೋಂಕು ತಗುಲಿದೆ. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ಗೆ ಸಿಎಂ ಹೋಗಿದ್ದರು. ಅಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.