ಬೆಂಗಳೂರು: ಸಚಿವ ಸಂಪುಟದಲ್ಲಿ ಖಾಲಿ ಉಳಿದಿರುವ ಎಲ್ಲಾ ಏಳು ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಸಮ್ಮತಿ ನೀಡಿದ್ದು, 3+4 ಸೂತ್ರದಂತೆ ಸಂಪುಟ ಭರ್ತಿ ಮಾಡಲು ಸಿಎಂ ನಿರ್ಧರಿಸಿದ್ದಾರೆ.
ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ. ರಾಜೀನಾಮೆ ಕೊಟ್ಟು ಬಂದವರಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಸಚಿವರಾಗುವುದು ಬಹುತೇಕ ನಿಶ್ಚಿತವಾಗಿದ್ದು, ಪರಿಷತ್ ಸ್ಥಾನದ ವಿವಾದ ಕೋರ್ಟ್ನಲ್ಲಿರುವ ಕಾರಣ ಹೆಚ್.ವಿಶ್ವನಾಥ್ ಸ್ಥಿತಿ ಡೋಲಾಯಮಾನವಾಗಿದೆ.ಅವರಿಗೆ ಸಚಿವ ಸ್ಥಾನ ಸಿಕ್ಕುವುದು ಅನುಮಾನವಾಗಿದೆ.
ಇನ್ನು ಮೂರು ಸ್ಥಾನ ಭರ್ತಿ ನಂತರ ಉಳಿಯುವ ನಾಲ್ಕು ಸ್ಥಾನ ಮೂಲ ಬಿಜೆಪಿಗರ ಪಾಲಿಗೆ ಲಭ್ಯವಾಗಲಿವೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸಂಪುಟ ಸೇರಲು ಸರ್ಕಸ್ ನಡೆಸುತ್ತಿರುವ ಹಿರಿಯ ನಾಯಕ ಉಮೇಶ್ ಕತ್ತಿ ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಆಪರೇಷನ್ ಕಮಲದಲ್ಲಿ ಸಕ್ರೀಯವಾಗಿದ್ದ ಸಿ.ಪಿ ಯೋಗೀಶ್ವರ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್, ಸುನೀಲ್ ಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಅಂಗಾರ, ತಿಪ್ಪಾರೆಡ್ಡಿ ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದು ತಮ್ಮ-ತಮ್ಮ ಪ್ರಭಾವ ಬಳಸಿ ಸಿಎಂ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ಇನ್ನೆರಡು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದು, ಯಾರೆಲ್ಲಾ ಸಿಎಂ ಸಂಪುಟಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.