ಬೆಂಗಳೂರು: ನಮ್ಮ ಶಿಕ್ಷಕರು ನಮಗೆ ಏಟು ಕೊಟ್ಟು ತಿದ್ದಿದ ಕಾರಣದಿಂದಲೇ ನಾವು ಇಂದು ಈ ಸ್ಥಾನದವರೆಗೆ ತಲುಪಿದ್ದೇವೆ ಆದರೆ ಇಂದು ಶಿಕ್ಷಕರು ಮಕ್ಕಳಿಗೆ ಏಟು ಕೊಟ್ಟರೆ ಪೋಷಕರು ಪೊಲೀಸ್ ಠಾಣೆ ಇಲ್ಲವೇ ನ್ಯಾಯಾಲಯದ ಮೆಟ್ಟಿಲೇರುತ್ತಾರೆ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಬದಲಾದ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಹಿಮಾಚಲಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಎಲ್. ನಾರಾಯಣಸ್ವಾಮಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು. ಈ ವೇಳೆ ಕರ್ನಾಟಕ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾ.ಎಲ್ ನಾರಾಯಣಸ್ವಾಮಿ ಅವರು,ನಾನು ಇವತ್ತಿಗೂ ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೇನೆ,ಅವತ್ತಿನ ಶಿಕ್ಷಕರು ಕೊಟ್ಟ ಏಟು ಇನ್ನೂ ನೆನಪಿದೆ. ಆ ಶಿಕ್ಷಕರ ಏಟಿಗೆ ಒಂದು ಉದ್ದೇಶ ಇತ್ತು. ಅದು ಇವತ್ತು ಈಡೇರಿದೆ. ಅದೇ ಕಾರಣಕ್ಕೆ ನಾವು ಇಂದಿಗೂ ಅವರನ್ನ ನೆನಪು ಮಾಡಿಕೊಳ್ಳುತ್ತೇವೆ, ಅವರು ಒಳ್ಳೆಯ ಉದ್ದೇಶದಿಂದ ನಮ್ಮನ್ನ ತಿದ್ದಿದ್ದರು ಎಂದು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕುಹಾಕಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಾರಾಯಣ ಸ್ವಾಮಿಯವರು ಮುಖ್ಯ ನ್ಯಾಯಮೂರ್ತಿಯಾಗಿರುವುದು ನಮಗೆ ಹೆಮ್ಮೆಯ ಸಂಗತಿ, ಅವರು ಹಿಮಾಚಲಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿರುವುದು ಸಂತಸದ ವಿಚಾರ ಎಂದರು.
ನ್ಯಾಯಾಂಗದ ಮೇಲೆ ಜನರಿಗೆ ಅಪಾರ ನಂಬಿಕೆ ಇದೆ. ನಿಷ್ಪಕ್ಷಪಾತ, ಸದೃಢವಾದ ನ್ಯಾಯಾಂಗ ವ್ಯವಸ್ಥೆ ಅಗತ್ಯವಿದೆ.
ವಕೀಲರಿಗೆ 5000 ಮಾಸಾಶನ, ಸಂಘಕ್ಕೆ ನಿವೇಶನ ನೀಡುವ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ, ಆದಷ್ಟು ಬೇಗ ವಕೀಲರ ಸಂಘದ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.