ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಸಚಿವರಾದ ಮನಸುಖ್ ಮಾಂಡವಿಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಹಾಗೂ ಕೋವಿಡ್ ಲಸಿಕೆ ಕುರಿತು ಚರ್ಚಿಸಿದರು.
ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಖಾತೆ ಸಚಿವರನ್ನು ಭೇಟಿ ಮಾಡಿದರು. ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಜಿಎಸ್ಟಿ ಮಿನಿಸ್ಟರ್ಸ್ ಆಫ್ ಕೌನ್ಸಿಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೇನೆ. ಎರಡು ತಿಂಗಳಿನಲ್ಲಿ ವರದಿ ಕೊಡಬೇಕು ಎನ್ನುವ ಸೂಚನೆ ಇರುವುದರಿಂದ ಮತ್ತು ಬಹಳ ಪ್ರಮುಖವಾಗಿ ಜಿಎಸ್ಟಿ ಆದಾಯವನ್ನು ಹೆಚ್ಚಿಸಬೇಕಿದೆ. ಜಿಎಸ್ಟಿ ಕೌನ್ಸಿಲ್ ಪುನಾರಚನೆ ಮಾಡುವುದು ಸೇರಿದಂತೆ ಪ್ರಮುಖ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುತ್ತೇನೆ. ಆದಷ್ಟು ಬೇಗ ಮೊದಲನೇ ಸಭೆಯನ್ನು ಕರೆಯುತ್ತೇನೆ. ಈ ಹಿನ್ನೆಲೆಯಲ್ಲಿ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು.
ನಬಾರ್ಡ್ ಯೋಜನೆಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ಕೊಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇನೆ. ನಬಾರ್ಡ್ ನಡಿ ಮೂಲ ಸೌಕರ್ಯಕ್ಕೆ ಇರುವ ಯೋಜನೆಯಲ್ಲಿ ಈ ವರ್ಷ ಹೆಚ್ಚಿನ ಅನುದಾನವನ್ನು ಕೊಡಬೇಕು ಎಂದು ಕೇಳಿದ್ದೇನೆ, ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಹೆಚ್ಚಿನ ನೆರವನ್ನು ಕೋರಲಾಗಿದೆ ಎಂದು ತಿಳಿಸಿದರು.
ನವಂಬರ್ ಮೊದಲನೇ ವಾರ ಹಣಕಾಸು ಸಚಿವರು ಬೆಂಗಳೂರಿಗೆ ಬರಲಿದ್ದಾರೆ. ನಬಾರ್ಡ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳ ಕುರಿತು ಎರಡು ಪ್ರತ್ಯೇಕ ಸಭೆಯನ್ನು ಮಾಡಿ ಕರ್ನಾಟಕದ ಯೋಜನೆಗಳ ರೂಪರೇಷೆಗಳನ್ನು ಮಾಡಿ ಅಲ್ಲಿಯೇ ನಿರ್ದೇಶನ ಕೊಡುತ್ತೇನೆ ಎಂದಿದ್ದಾರೆ.
ಹಾಗಾಗಿ ಹಣಕಾಸು ಸಚಿವರ ಮಹತ್ವದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಸಣ್ಣ ಕೈಗಾರಿಕೆ ಮತ್ತು ಮೈಕ್ರೋಫೈನಾನ್ಸ್ಗೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಲು ಆದ್ಯತೆ ಕೊಡಲಾಗುತ್ತದೆ ಮತ್ತೆ ನಬಾರ್ಡ್ನ ಹೆಚ್ಚಿನ ಅನುದಾನ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ಕೊಡುವುದು ಸೇರಿ ಹಲವು ವಿಷಯಗಳು ಚರ್ಚೆಯಲ್ಲಿ ಇರಲಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕಳೆದ ವರ್ಷದವರೆಗೂ ಸಂಪೂರ್ಣವಾದ ಜಿಎಸ್ಟಿ ಪರಿಹಾರ ಬಂದಿದೆ. ಕೊರೊನಾ ವರ್ಷದಲ್ಲಿ ಮಾತ್ರ 12000 ಕೋಟಿ ಬಂದಿದೆ.ಈ ವರ್ಷದ ಮಾರ್ಚ್ ವರೆಗೂ 11,800 ಕೋಟಿ ಬರಬೇಕಿದೆ ಅದನ್ನ ಕಂತುಗಳಲ್ಲಿ ಕೊಡಲು ಕೇಂದ್ರ ಪ್ರಾರಂಭಿಸಿದೆ.
ಅಲ್ಲದೇ ಈ ವರ್ಷ 18 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಸಾಲ ಮಾಡಿ ನಮಗೆ ಕೊಡಲಿದೆ ನಾವು 12 ಸಾವಿರ ಕೋಟಿ ನಿರೀಕ್ಷೆ ಮಾಡಿದ್ದೇವೆ. ಆದರೆ, ನಮಗೆ 18 ಸಾವಿರ ಕೋಟಿ ಸಾಲ ಮಾಡಿಕೊಡಲಾಗುತ್ತಿದೆ ಈ ವರ್ಷ ಜಿಎಸ್ಟಿ ಸಂಗ್ರಹ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚಾಗಿದೆ ಹಾಗಾಗಿ ಪರಿಹಾರದ ಹಣವು ನಮಗೆ ಹೆಚ್ಚಿಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.