ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಅದ್ಧೂರಿ ಕಾರ್ಯಕ್ರಮದ ಮೂಲಕ ಬಿಜೆಪಿ ಅಭಿನಂದಿಸಿತು.
ನಗರದ ಅರಮನೆ ಮೈದಾನದಲ್ಲಿ ನಡೆದ ನೂತನ ರಾಜ್ಯಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಬಳಿಕ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯ ಪ್ರಮಾಣಪತ್ರವನ್ನು ನೀಡಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಳೀನ್, ನಮ್ಮ ಪಕ್ಷದಲ್ಲಿ 37 ಸಂಘಟನಾತ್ಮಕ ಜಿಲ್ಲೆಗಳಿವೆ. ಅದರಲ್ಲಿ 26ಕ್ಕೂ ಹೆಚ್ಚು ಜಿಲ್ಲೆಗಳ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಒಬ್ಬ ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗಬಲ್ಲ. ನಿಂಬೆಹಣ್ಣು ಮಾರುವ ಹುಡುಗ ಮುಖ್ಯಮಂತ್ರಿಯಾಗಬಲ್ಲ. ಮತಗಟ್ಟೆಯಲ್ಕಿ ಕೆಲಸ ಮಾಡುವವನು ರಾಜ್ಯಾಧ್ಯಕ್ಷ ಆಗ ಬಲ್ಲ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ಬಿಜೆಪಿ ರಾಷ್ಡ್ರೀಯ ಅಧ್ಯಕ್ಷ ಅಮಿತ್ ಷಾನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಿಯುಕ್ತಿಗೊಳಿಸಿದಾಗ ಭಯ, ಆತಂಕ ಉಂಟಾಗಿತ್ತು. ಆದರೆ ಯಡಿಯೂರಪ್ಪನವರು ಧ್ವಜವನ್ನು ಕೊಟ್ಟು ಮುನ್ನುಗ್ಗು ಎಂದಾಗ ಆತ್ಮವಿಶ್ವಾಸ ಬಂತು. ದಕ್ಷಿಣ ಕನ್ನಡ ಬಿಟ್ಟು ಬೇರೆ ಜಿಲ್ಲೆ ನೋಡದ ನನಗೆ ಪಕ್ಷದ ಮುಖಂಡರು ಮನೆಯಲ್ಲಿ ಕೂರಬೇಡ ಹೋಗು ರಾಜ್ಯ ಪ್ರವಾಸ ಮಾಡು ಎಂದರು.
ಸಮಾರಂಭದಲ್ಲಿ ಸಿಎಎ ಮತ್ತು ಎನ್ಆರ್ಸಿ ಸಮರ್ಥಿಸುವ ರೀತಿಯಲ್ಲಿ ಬಾಂಗ್ಲಾದಿಂದ ಆಗಮಿಸಿದ್ದವರ ಸ್ಥಿತಿಗತಿ ವಿವರಿಸವ 'ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು' ಎನ್ನುವ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಷಿ,ಡಿಸಿಎಂಗಳಾದ ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ,ಸಚಿವರಾದ,ಸಿ.ಟಿ ರವಿ,ಈಶ್ವರಪ್ಪ, ಅಶೋಕ್, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಪಕ್ಷದ ಶಾಸಕರು, ಸಂಸದರು, ಪದಾಧಿಕಾರಿಗಳು ಉಪಸ್ಥಿರಿದ್ದರು.