ಬೆಂಗಳೂರು: ತರಕಾರಿ ತರಲು ಹೊರಗಡೆ ಬಂದಿದ್ದ ತಮಿಳುನಾಡು ಮೂಲದ ವೃದ್ಧೆಯೋರ್ವರು ಮನೆ ವಿಳಾಸ ತಿಳಿಯದೇ ಪರದಾಡಿದ್ದರು. ಇದನ್ನು ಗಮನಿಸಿದ ಪುಲಕೇಶಿನಗರ ಪೊಲೀಸರು ವೃದ್ಧೆ ಉಳಿದುಕೊಂಡಿದ್ದ ಮನೆಯನ್ನು ಪತ್ತೆ ಹಚ್ಚಿ, ಮನೆಗೆ ತಲುಪಿಸಿದ್ದಾರೆ.

ತಮಿಳುನಾಡಿನ ತಿರುಮಣಾಮಲೈ ಹರಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 60 ವರ್ಷದ ವಾಸಂತಿ ತನ್ನ ಮಗ-ಸೊಸೆ ಜೊತೆ ಇದೇ ತಿಂಗಳು 16ರಂದು ಬೆಂಗಳೂರಿಗೆ ಬಂದಿದ್ದರು. ಕಸ್ತೂರಿ ನಗರದಲ್ಲಿ ಇವರು ನೆಲೆಸಿದ್ದಾರೆ. ಇವರು ತನ್ನ ಮೊಬೈಲ್ ಮನೆಯಲ್ಲೇ ಬಿಟ್ಟು ತರಕಾರಿ ತರಲು ಸಮೀಪದ ಮಾರುಕಟ್ಟೆಗೆ ಬಂದಿದ್ದಾರೆ. ತರಕಾರಿ ಖರೀದಿಸಿ ವಾಪಸ್ ಬರುವಾಗ ಮನೆಯ ದಾರಿ ತಪ್ಪಿದೆ. ದಾರಿ ಹುಡುಕುತ್ತಾ ಪುಲಕೇಶಿ ನಗರ ಠಾಣಾ ವ್ಯಾಪ್ತಿಯ ಚಾರ್ಲಸ್ ಸೂಲ್ಕ್ ಬಳಿ ಬಂದು ನಿತ್ರಾಣಗೊಂಡಿದ್ದರು.
ಇದನ್ನೂ ಓದಿ: ಬೆಳಗಾವಿ ತ್ರಿವಳಿ ಕೊಲೆ ಕೇಸ್ ಆರೋಪಿ ಪ್ರವೀಣ್ ಭಟ್ ಖುಲಾಸೆ: ವಕೀಲರು ಹೇಳಿದ್ದೇನು?
ಸ್ಥಳೀಯರು ವೃದ್ಧೆಯನ್ನು ಕಂಡು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವೃದ್ಧೆಗೆ ಮನೆಯವರ ಹೆಸರು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ತಮಿಳಿನಲ್ಲಿ ಹೇಳಿದ್ದಾರೆ. ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ತಿರುಮಣಾಮಲೈನಲ್ಲಿ ವಾಸವಾಗಿರುವುದಾಗಿ ತಿಳಿಸಿದರು. ಬಳಿಕ ಹರಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಲ್ಲಿ ವಾಸವಾಗಿದ್ದ ವೃದ್ಧೆಯ ಗಂಡನ ಜೊತೆ ಮಾತನಾಡಿ, ನಂತರ ಕಸ್ತೂರಿನ ಗರದಲ್ಲಿರುವ ಮನೆ ವಿಳಾಸ, ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಈ ರೀತಿ ಸಂಪರ್ಕ ಸಾಧಿಸಿ ಆವರನ್ನು ಮನೆಯವರಿಗೆ ಒಪ್ಪಿಸಿದರು.