ಬೆಂಗಳೂರು : ಹಗಲಲ್ಲಿ ಬಲೂನ್ ಮಾರಾಟ ಮಾಡಿ ರಾತ್ರಿ ಹೊತ್ತು ಮನೆಗಳ್ಳತನ ಮಾಡುತ್ತಿದ್ದ ಬಗಾರಿಯಾ ಗ್ಯಾಂಗ್ನ ಮೂವರು ಸದಸ್ಯರನ್ನು ಅಮೃತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜಸ್ಥಾನದ ಅಜ್ಮೀರ್ ಧರ್ಮ, ಮುಖೇಶ್, ಲಕ್ಷ್ಮಣ ಬಂಧಿತ ಆರೋಪಿಗಳು.
ಕಳೆದ ಆಗಸ್ಟ್ ನಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು ಹಗಲಿನಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದರು. ಬಲೂನ್ ಮಾರುತ್ತಾ ಏರಿಯಾಗಳಲ್ಲಿ ಸುತ್ತಾಡುತ್ತಿದ್ದರು. ಬಂಧಿತ ಮೂವರು ಆರೋಪಿಗಳ ಪೈಕಿ ಧರ್ಮ ಹಾಗೂ ಮುಖೇಶ್ ಬಲೂನ್ ಮಾರಾಟ ಮಾಡುವ ವೇಷ ಧರಿಸಿದರೆ, ಮತ್ತೊಬ್ಬ ಆರೋಪಿ ಲಕ್ಷ್ಮಣ ಬಾಡಿಗೆಗೆ ಆಟೋ ಪಡೆದಿದ್ದ. ಹೀಗೆ ಹಗಲಲ್ಲಿ ಬಲೂನ್ ಮಾರಾಟ ಮಾಡಿ ನೈಟ್ ಮನೆಗಳ್ಳತನ ಮಾಡುತ್ತಿದ್ದ ಈ ಖತರ್ನಾಕ್ ಖದೀಮರು ಕೊನೆಗೂ ಅಂದರ್ ಆಗಿದ್ದಾರೆ.
ಬಲೂನ್ ಮಾರುತ್ತಾ ಒಂಟಿ ಮನೆ ಟಾರ್ಗೆಟ್ ಮಾಡುತ್ತಿದ್ದ ಐನಾತಿಗಳು : ಈ ಮೂವರು ಅಜ್ಮೀರ್ ಬಳಿಯ ಬಗಾರಿಯಾ ಡಕಾಯಿತಿ ಗ್ಯಾಂಗ್ನವರು. ಕಳ್ಳತನಕ್ಕೆಂದು ನಗರಕ್ಕೆ ಬಂದು ಹಗಲಲ್ಲಿ ಬಲೂನ್ ಮಾರೋ ವೇಳೆ ಒಂಟಿ ಮನೆ ಟಾರ್ಗೆಟ್ ಮಾಡಿ, ರಾತ್ರಿ ವೇಳೆ ಮೂವರು ಸೇರಿ ಕಳ್ಳತನ ಮಾಡುತ್ತಿದ್ದರು. ಮುಖೇಶ್ ಧರ್ಮ ಮನೆಯೊಳಗೆ ಹೋದರೆ ಲಕ್ಷಣ ಆಟೋದಲ್ಲಿ ಹೊರಗೆ ಕಾಯುತ್ತಿದ್ದ. ಒಂದು ಮನೆಯ ಬೀಗ ಒಡೆದು ಒಳಹೋಗಲು ಆರೋಪಿಗಳು ಕೇವಲ ಎರಡು ನಿಮಿಷ ತೆಗೆದುಕೊಳ್ಳುತ್ತಿದ್ದರಂತೆ.
ಆರೋಪಿ ಮುಖೇಶ್ ನನ್ನ ಹಿಡಿಯಲು ಅಮೃತಹಳ್ಳಿ ಇನ್ಸ್ ಪೆಕ್ಟರ್ ಗುರುಪ್ರಸಾದ್ ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದ ಟೀಂ ರಾಜಸ್ಥಾನದ ಅಜ್ಮೀರ್ಗೆ ತೆರಳಿತ್ತು. ಆಗ ಈ ಆರೋಪಿ ಪೊಲೀಸರ ಕೈಗೆ ಸಿಗದೇ ಕಾಡುಮೇಡಿನಲ್ಲಿ ಹತ್ತು ಕಿಲೋಮೀಟರ್ ಓಡಾಡಿಸಿದ್ದನಂತೆ. ಕೊನೆಗೂ ಆರೋಪಿಯನ್ನ ಹಿಡಿಯುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ ಕೆ ಬಾಬಾ, ಕಳೆದ ಜೂನ್ ನಲ್ಲಿ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ. ಬಂಧಿತರು ರಾಜಸ್ಥಾನದ ಬಗಾರಿಯಾ ಗ್ಯಾಂಗ್ ನವರೆಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಪ್ರಕರಣದ ತನಿಖೆ ಮುಂದುವರೆದಿದೆ ಎಂದರು. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಆಟೋ ಹಾಗೂ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ರೈಲ್ವೆ ನಿಲ್ದಾಣದಿಂದ ಬಾಲಕಿಯ ಅಪಹರಣ : 7 ಮಂದಿ ದುರುಳರಿಂದ ಗ್ಯಾಂಗ್ ರೇಪ್