ಬೆಂಗಳೂರು: ಮನೆ ಮಾಲೀಕನಿಗೆ ನಂಬಿಕಸ್ಥನಂತೆ ಇದ್ದು, ಪೋಲಿಸರಿಂದ ಭದ್ರವಾಗಿದ್ದ ಲಾಕರ್ ಕದ್ದ ಮನೆಗೆಲಸ ಮಾಡುವ ಕಳ್ಳನನ್ನ ಬಂಧಿಸುವಲ್ಲಿ ಜೆಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೈಲಾಸ್ ದಾಸ್ ಬಂಧಿತ ಆರೋಪಿ. 48 ಗಂಟೆಯೊಳಗೆ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಲು ಮನೆಯಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಹಕಾರಿಯಾಗಿದೆ. ಸಿಸಿಟಿವಿಯಲ್ಲಿ ಆರೋಪಿ ಮನೆಯಿಂದ ಲಾಕರ್ ಸಮೇತ 1 ಕೋಟಿ 30 ಲಕ್ಷ ರೂ. ಮೌಲ್ಯದ ವಜ್ರ ಹರಳಿರುವ 1,731 ಗ್ರಾಂ ತೂಕದ ಚಿನ್ನಾಭರಣ ಮತ್ತು ವಜ್ರದ ಆಭರಣ, 2,536 ಗ್ರಾಂ ಬೆಳ್ಳಿಯ ಕಾಮಧೇನು ವಿಗ್ರಹ ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿಯ ಹಿನ್ನೆಲೆ: ಬಂಧಿತ ಕೈಲಾಸ್ ದಾಸ್ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜೇಶ್ ಬಾಬು ಎಂಬುವವರ ಮನೆ ಕೆಲಸಕ್ಕೆ ಕಳೆದ 6 ವರ್ಷಗಳ ಹಿಂದೆ ಸೇರಿಕೊಂಡಿದ್ದ. ಈತ ಪಶ್ಚಿಮ ಬಂಗಾಳ ಮೂಲದವನು. ಇತ್ತೀಚೆಗೆ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಸದಸ್ಯರು ಇಲ್ಲದ ಸಮಯದ ಲಾಭ ಪಡೆದುಕೊಂಡು ಪೊಲೀಸರಿಂದ ಭದ್ರವಾದ ಲಾಕರ್ ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ.