ಬೆಂಗಳೂರು: ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುವ ಸುವ್ಯವಸ್ಥಿತ ಬೆಂಗಳೂರನ್ನು ಕಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಔಟರ್ ರಿಂಗ್ ರಸ್ತೆಯ ತ್ರಿಪಥ ಮೇಲುಸೇತುವೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ, ಸಾಮಾಜಿಕ ಕೆಲಸಗಳಿಗೆ ಮುಂದಾಗಿರುವ ಮಾನ್ಯತಾ ಪಾರ್ಕ್ ನಾಗರಿಕ ಸಮಾಜವನ್ನು ಕಟ್ಟಬೇಕು. ಯಾವುದೇ ನಗರದಲ್ಲಿ ನಾಗರಿಕ ಸಂಸ್ಥೆಗಳಿರಬೇಕು. ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರ ದೊರಕಿಸಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಬೆಳವಣಿಗೆಯಾಗುತ್ತಲೇ ಇರುವ ನಗರ. ಇಲ್ಲಿ ಶಿಕ್ಷಣ, ಕೆಲಸ, ವ್ಯಾಪಾರ ಕ್ಕಾಗಿ ಬರುವ ಜನ ಇಲ್ಲಿಯೇ ನೆಲೆಸುತ್ತಾರೆ. ರಾಜಧಾನಿಯಲ್ಲಿನ ಸೌಲಭ್ಯಗಳು ಅದನ್ನು ಜನಪ್ರಿಯ ಗೊಳಿಸಿವೆ ಎಂದರು.
ಬೆಂಗಳೂರನ್ನು ಯೋಜನಾಬದ್ಧವಾಗಿ ಬೆಳೆಸಬೇಕು: ಬೆಂಗಳೂರಿನ ಗತ ವೈಭವವನ್ನು ನೆನೆಸುವ ಹಾಗೂ ಭವಿಷ್ಯದತ್ತ ದಾಪುಗಾಲು ಹಾಕುತ್ತಿರುವ ಬೆಂಗಳೂರು ನಿರ್ಮಿಸುವ ಕನಸು ನನ್ನದು. ಯಾವುದೇ ಮಾದರಿಯನ್ನು ಅನುಸರಿಸಬೇಕಿಲ್ಲ. ನಗರವನ್ನು ಯೋಜನಾರಹಿತವಾಗಿ ಬೆಳೆಸುವುದನ್ನು ತಡೆದು ಯೋಜನಾಬದ್ಧವಾಗಿ ಬೆಳೆಸಬೇಕು. ಎಲ್ಲಾ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ , ಸಾರಿಗೆ ವ್ಯವಸ್ಥೆಗಳಿರಬೇಕು. ಬೆಂಗಳೂರು ನಾಲ್ಕು ದಿಕ್ಕುಗಳಲ್ಲಿಯೂ ಬೆಳೆಯುತ್ತಿದೆ. ಅದರಿಂದ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಿದೆ ಎಂದ ತಿಳಿಸಿದರು.
ಗ್ರಾಮಗಳನ್ನು ನಗರವಾಗಿ ಪರಿವರ್ತನೆ: ಗ್ರಾಮಗಳನ್ನು ನಗರವನ್ನಾಗಿ ಪರಿವರ್ತಿಸಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನಾಗಿ ಮಾಡಿದ್ದೇವೆ. ಸರ್ಕಾರ, ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮಂಡಳಿ , ಬಿಡಿಎ, ಹಾಗೂ ಮತ್ತಿತರ ಸಂಸ್ಥೆಗಳ ಮೇಲೆ ಹಾಗೂ ಬೆಂಗಳೂರಿನ ಜನತೆರ ಮೇಲೂ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.
ಹೆಬ್ಬಾಳದಿಂದ ಏರ್ಪೋರ್ಟ್ ಮೆಟ್ರೋ : ರಾಜಧಾನಿ ಬೆಂಗಳೂರಿಗೆ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿ ಇದೆ. ದೇಶದೆಲ್ಲೆಡೆಯಿಂದ ಬಂದು ನೆಲೆಸುವ ಜನರು ಈ ನಗರದ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳುವಂತಿರಬೇಕು. ನಗರದಲ್ಲಿ ವಾಹನ ದಟ್ಟಣೆ ಒಂದು ಸವಾಲಾಗಿದೆ. ಫೆರಿಫೆರಲ್ ರಿಂಗ ರಸ್ತೆಗಳನ್ನುನಿರ್ಮಿಸಲಾಗುತ್ತಿದೆ. ಹೆಬ್ಬಾಳ ಫ್ಲೈಓವರ್ನ್ನು ದೊಡ್ಡದು ಮಾಡುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲಾಗಿದೆ. ಇದರಿಂದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಬಹುದಾಗಿದೆ. ಹೆಬ್ಬಾಳದಿಂದ - ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಎಂದರು.
ಬೆಂಗಳೂರು ವಾಸಯೋಗ್ಯ ನಗರ : ಬೆಂಗಳೂರಿನ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. 1500 ಕೋಟಿ ರೂ.ಗಳನ್ನು ಒಳಚರಂಡಿ ವ್ಯವಸ್ಥೆಗೆ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತಮವಾದ ವಾಸಯೋಗ್ಯ ನಗರವಾಗಲಿದೆ. ನಗರ ಯೋಜನೆಯಲ್ಲಿನ ಎಲ್ಲ ಅಡಚಣೆಗಳನ್ನು, ಸವಾಲುಗಳನ್ನು ನಿವಾರಿಸಿ ಬೆಂಗಳೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು, ಮುಂಬೈ, ಚನ್ನೈ, ಹೈದರಾಬಾದ್ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಸಿಗ್ನಲ್ ರಹಿತ 12 ಕಾರಿಡಾರ್ಗಳನ್ನು ನಿರ್ಮಿಸಲಾಗುವುದು. ಬೆಂಗಳೂರು ವಿಷನ್ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಐಟಿಬಿಟಿ ಸಿಟಿ ಬೆಂಗಳೂರು : ಐಟಿ ನಗರವಾಗಿರುವ ಬೆಂಗಳೂರು ಇನ್ನು ಮುಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ನವೀಕೃತ ಇಂಧನ, ಸೆಮಿಕಂಡಕ್ಟರ್ ಸೇರಿದಂತೆ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತಹ ನಗರವಾಗಬೇಕು. ನಗರದಲ್ಲಿ ಹೆಚ್.ಎ.ಎಲ್, ಬಿ.ಇ.ಎಲ್, ಹೆಚ್.ಎಂ.ಟಿ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಉತ್ತಮ ಇಂಜಿನಿಯರಿಂಗ್ ಉತ್ಪಾದನೆಗಳನ್ನು ಉತ್ಪಾದಿಸಲಾಗುತ್ತಿದ್ದು, ಅತ್ಯುತ್ತಮ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ.
ಆರ್ ಎಂಡ್ ಡಿ ವಲಯದಲ್ಲಿನ ಈ ಕೌಶಲ್ಯವೇ ಬೆಂಗಳೂರು ನಗರವನ್ನು ಐಟಿ-ಬಿಟಿ ನಗರವನ್ನಾಗಿಸಿದೆ. ಪ್ರಸ್ತುತ ರಕ್ಷಣಾವಲಯ, ಇಸ್ರೋ, ಬಯೋಟೆಕ್, ಆಹಾರ, ಏರೋಸ್ಪೇಸ್ ಸೇರಿದಂತೆ ಹಲವಾರು ಕ್ಷೇತ್ರಗಳ ಸಂಶೋಧನಾ ಕೇಂದ್ರಗಳಿವೆ. 180 ಸಂಶೋಧನಾ ಕೇಂದ್ರಗಳು ಬೆಂಗಳೂರು ನಗರದಲ್ಲಿವೆ. ಬೆಂಗಳೂರಿನ ಭದ್ರ ಭವಿಷ್ಯಕ್ಕೆ ಇವುಗಳನ್ನು ಬಂಡವಾಳವಾಗಿಸಿಕೊಳ್ಳಬೇಕು. ನಾಡಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡಬೇಕಿದೆ ಎಂದು ತಿಳಿಸಿದರು.
ಯೋಜನಾಬದ್ಧವಾದ, ಉತ್ತಮ ಭವಿಷ್ಯದ ಗುರಿ ಇರುವ ನಗರ : ಬೆಂಗಳೂರು ನಗರವನ್ನು ಮೂಲ ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅನೇಕ ಅಭಿಪ್ರಾಯಗಳು, ಮಾರ್ಗದರ್ಶನ ನಮಗೆ ಬೇಕಿದೆ. ಯೋಜನಾಬದ್ಧವಾದ, ಉತ್ತಮ ಭವಿಷ್ಯದ ಗುರಿ ಇರುವ ನಗರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

183 ಕೋಟಿ ವೆಚ್ಚದ ಕಾಮಗಾರಿಗಳು: 183 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಿಂಗ್ ರಸ್ತೆ ಮತ್ತು ಮಾನ್ಯತಾ ಟೆಕ್ ಪಾರ್ಕ್ನ ಫ್ಲೈಓವರ್ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಖಾಸಗಿ ಸಂಸ್ಥೆಗಳ ಇಂತಹ ಉಪಕ್ರಮ ನಗರಕ್ಕೆ ಬಹಳ ಸಹಕಾರಿಯಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಎಂಬೆಸ್ಸಿ ಗ್ರೂಪ್ ಗೆ ಬೊಮ್ಮಾಯಿ ಅಭಿನಂದಿಸಿದರು.