ಬೆಂಗಳೂರು: ವೀಸಾ ಅವಧಿ ಮುಗಿದರೂ ಕೂಡ ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ದಂಪತಿಯನ್ನು ಅವರ ದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಪ್ರಮಾಣ ಕಡಿತಗೊಳಿಸುವಂತೆ ಕೋರಿ ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ನಿವಾಸಿ ಕಾಸೀಫ್ ಶಂಸುದ್ದೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್ಗುಲಾಮ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ಕುಮಾರ್ ಅವರಿದ್ದ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಲಾಯಿತು.
ಸರ್ಕಾರದ ಪರ ವಾದಿಸಿದ ವಕೀಲರು, ದಂಪತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಕೋರಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.ವಕೀಲರ ವಾದ ಆಲಿಸಿದ ನ್ಯಾಯಪೀಠವು ಅನುಮತಿ ಕೇಳುವ ಅಗತ್ಯ ಏನಿದೆ. ಅಕ್ರಮವಾಗಿ ನೆಲೆಸಿರುವ ಇವರನ್ನು ಕಾರಾಗೃಹದಲ್ಲಿ ಇರಿಸಿ ಏಕೆ ಸಾಕಬೇಕು. ಭಾರತೀಯರ ತೆರಿಗೆ ಹಣದಲ್ಲಿ ಇರುವ ಅನ್ನ ತಿನ್ನುತ್ತಿದ್ದಾರೆ. ತಕ್ಷಣ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಸೂಚಿಸಿತು.
ಪ್ರಕರಣವೇನು:
ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್ ನಿವಾಸಿ ಕಾಸೀಫ್ ಶಂಸುದ್ದೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್ ಗುಲಾಮ್ ಅಲಿ ಬೆಂಗಳೂರಿಗೆ ಬಂದು ಮದುವೆಯಾಗಿದ್ದರು. ದಂಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ವೀಸಾದ ಅವಧಿ ಮುಗಿದ ನಂತರವೂ ದಂಪತಿ ಇಲ್ಲಿಯೆ ನೆಲೆಸಿದ್ದಾರೆ ಎಂಬ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿದ್ದರು.