ಆನೇಕಲ್: ತಾಲೂಕಿನ ಬಿದರಗುಪ್ಪೆ ಗ್ರಾಮದಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ತಹಶೀಲ್ದಾರ್ ಪಿ.ದಿನೇಶ್ ತಂಡ ದಾಳಿ ನಡೆಸಿ, ಹೊಂಡಗಳನ್ನು ನಾಶಪಡಿಸಿದ್ದಾರೆ.
ಬಿದರಗುಪ್ಪೆ ಕೆರೆಯಂಗಳದ ಇಂಡ್ಲಬೆಲೆ ಬಳಿಯ ಸರ್ವೆ ನಂ. 143ರ 15 ಗುಂಟೆಯ ಜಮೀನಿನಲ್ಲಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆ ಶಾರದಾ ಮತ್ತು ಮಾಜಿ ಅಧ್ಯಕ್ಷ ಎಸ್.ವೆಂಕಟೇಶ್ ದಂಪತಿ ನಿಷೇಧಿತ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದರು. ಈ ವಿಷಯ ತಿಳಿದ ತಹಶೀಲ್ದಾರ್ ತಂಡ, ದಾಳಿ ನಡೆಸಿ ಹೊಂಡಗಳನ್ನು ನಾಶಪಡಿಸಿದ್ದಾರೆ.
ಈ ಹಿಂದೆ ಕೂಡ ಇದೇ ಜಮೀನಿನಲ್ಲಿ ಕ್ಯಾಟ್ ಫಿಶ್ ಸಾಕಣೆ ಮಾಡಲಾಗಿತ್ತು. ಆಗಲೂ ಹಿಂದೆಯಿದ್ದ ತಹಶೀಲ್ದಾರ್ ದಾಳಿ ನಡೆಸಿ, ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಮತ್ತೆ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗ್ತಿದೆ.
ದಂಪತಿಯಿಂದ ಧಮ್ಕಿ
ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ವಿಷಯ ತಿಳಿದ ಮಾಧ್ಯಮಗಳು ಸ್ಥಳಕ್ಕೆ ತೆರಳಿದ್ದು, ಈ ವೇಳೆ ಶಾರದಾ ಮತ್ತು ವೆಂಕಟೇಶ್ ದಂಪತಿ ಸುದ್ದಿ ಪ್ರಸಾರ ಮಾಡದಂತೆ ಧಮ್ಕಿ ಹಾಕಿದ್ದಾರೆ. ಅಷ್ಟರಲ್ಲಿ ತಹಶೀಲ್ದಾರ್ ಪಿ.ದಿನೇಶ್ ಹಾಗೂ ಅತ್ತಿಬೆಲೆ ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ, ಜೆಸಿಬಿ ಮೂಲಕ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದ ಹೊಂಡಗಳನ್ನು ನಾಶಪಡಿಸಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆಗೆ ಸಾಲ ಕೊಟ್ಟ... ಬಡ್ಡಿ ಹಣ ಕೇಳಲು ಬಂದು ಮಗಳ ಮೇಲೆ ರೇಪ್