ಬೆಂಗಳೂರು: ಕಾನೂನು ಸಚಿವ ಜೆ.ಸಿ. ಮಾಧುಸ್ಚಾಮಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜೆಡಿಎಸ್ ಪೇಜ್ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ, ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಯೋಗೇಶ್ವರ್, ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
![ಜೆಡಿಎಸ್ ಪೇಜ್ ವಿರುದ್ಧ ಬಿಜೆಪಿ ದೂರು, BJP files complaint against JDS Page](https://etvbharatimages.akamaized.net/etvbharat/prod-images/5131135_thu.jpg)
ಏನಿದು ಪ್ರಕರಣ:?
ಸಾಮಾಜಿಕ ತಾಣ ಟಿಕ್ ಟಾಕ್ನಲ್ಲಿ ಪುರುಷರಿಗೆ ಮೋಸ ಮಾಡಿ ಹಣ ಪೀಕುತ್ತಿದ್ದ ಮಹಿಳೆಯ ಬಗ್ಗೆ ಇತ್ತೀಚಿಗೆ ಭಾರಿ ಸುದ್ದಿಯಾಗಿತ್ತು. ಸದ್ಯ ಅದೇ ಮಹಿಳೆಯ ಫೋಟೋ ಜೊತೆ ಸಚಿವ ಮಾಧುಸ್ವಾಮಿ ಫೋಟೋವನ್ನು ಜೋಡಿಸಿ, "ಟಿಕ್ ಟಾಕ್ನಲ್ಲಿ ಪರಿಚಯ, ಮದುವೆಯಾಗ್ತೀನಿ ಎಂದು ಮಾಧುಸ್ವಾಮಿಗೆ ನಾಲ್ಕು ಕೋಟಿ ಪೀಕಿದ ಬ್ಯೂಟಿ" ಎಂದು ಅಡಿ ಬರೆದು ಜೆಡಿಎಸ್ ಕರ್ನಾಟಕ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗರಂ ಆದ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ, ಸಚಿವ ಮಾಧುಸ್ವಾಮಿ ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದವರು ವಿಕೃತ ಸಂತೋಷ ಪಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪ್ರಕಟಿಸಿರುವ ಜೆಡಿಸ್ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ.