ನವದೆಹಲಿ: 2018ರ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ, ಟೇಬಲ್ ಟೆನಿಸ್ ಆಟಗಾರ ಆಂಥೋನಿ ಅಮಲ್ರಾಜ್ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಆದರೂ ಹರಿಯಾಣದ ಸೋನಿಪತ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ತಮ್ಮ ತಂಡದೊಂದಿಗೆ ಸೇರಲು ನಿರಾಕರಸಿದ್ದಾರೆ.
ಎರಡು ಬಾರಿ ನ್ಯಾಷನಲ್ ಚಾಂಪಿಯನ್ ಆಗಿರುವ ಅಮಲ್ರಾಜ್ (34), ಕಳೆದ ತಿಂಗಳು ಸೋಂಕಿಗೆ ಒಳಗಾಗಿದ್ದರು. ಇವರ ಪೋಷಕರಿಗೂ ವೈರಸ್ ಅಂಟಿತ್ತು. ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಶಿಬಿರಕ್ಕೆ ತೆರಳಲು ಹಿಂದೇಟು ಹಾಕುತ್ತಿರುವುದಕ್ಕೆ ಅಮಲ್ರಾಜ್ ಕಾರಣವನ್ನೂ ತಿಳಿಸಿದ್ದಾರೆ.
"ನಾನು ಆಸ್ಪತ್ರೆಯಲ್ಲಿದ್ದ ದಿನಗಳು ನನ್ನ ಜೀವನದ ಅತ್ಯಂತ ಕೆಟ್ಟ ದಿನಗಳಾಗಿತ್ತು. ಅದೃಷ್ಟವಶಾತ್ ನಾನೂ, ನನ್ನ ಹೆತ್ತವರು ವೈರಸ್ನಿಂದ ಬೇಗನೆ ಚೇತರಿಸಿಕೊಂಡೆವು. ಇದು ಎಷ್ಟು ಮಾರಕವೆಂಬುದು ನಮಗೆಲ್ಲರಿಗೂ ತಿಳಿದಿದೆ. ಬೇಗ ಗುಣವಾಗಿದ್ದಕ್ಕೆ ದೇವರಿಗೆ ಕೃತಜ್ಞರಾಗಿದ್ದೇವೆ. ನನಗೆ ಎದೆಯ ಸೋಂಕು ಇರುವ ಕಾರಣ ವೈದ್ಯರು ನನಗೆ ಇನ್ನೂ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ನಾನು ಮತ್ತೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ನಾನು ಶೇ.100 ರಷ್ಟು ಗುಣಮುಖನಾದ ಮೇಲೆಯೇ ಆಟಕ್ಕೆ ಸೇರುವ ಕುರಿತು ಯೋಚಿಸುವೆ" ಎಂದು ಅಮಲ್ರಾಜ್ ಹೇಳಿದ್ದಾರೆ.
ಕಳೆದ ವಾರ ಭಾರತದ ಟೇಬಲ್ ಟೆನಿಸ್ ಫೆಡರೇಶನ್(ಟಿಟಿಎಫ್ಐ) ಉಪಾಧ್ಯಕ್ಷ ಎಸ್ ಎಂ ಸುಲ್ತಾನ್ ಅವರು ಕೊರೊನಾಗೆ ಬಲಿಯಾಗಿದ್ದರು. ಅಲ್ಲದೇ ಅವರ ಪತ್ನಿ ಮತ್ತು ತಾಯಿ ಕೂಡ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರು.