ನವದೆಹಲಿ: ಗಾಯದಿಂದಾಗಿ ಹರಿಯಾಣ ಓಟಗಾರ್ತಿ ಅಂಜಲಿ ದೇವಿ ಇಂದಿನಿಂದ ಪಟಿಯಾಲದಲ್ಲಿ ಆರಂಭಗೊಳ್ಳುತ್ತಿರುವ ಹಿರಿಯ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ನ ಮಹಿಳಾ 400 ಮೀಟರ್ ಓಟದಿಂದ ಹೊರಗುಳಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂಜಲಿ ದೇವಿ, ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದಾಗ ಕ್ರೀಡಾಪಟು ಒಬ್ಬರು ನನ್ನ ತೊಡೆ ಸ್ನಾಯುಗಳನ್ನು ಎಳೆದಿದ್ದರು. ಹೀಗಾಗಿ, ನಾಲ್ಕರಿಂದ ಆರು ವಾರಗಳವರೆಗೆ ತರಬೇತಿಯಿಂದ ವಿರಾಮ ತೆಗೆದುಕೊಳ್ಳುವಂತೆ ವೈದ್ಯರು ನನಗೆ ಸಲಹೆ ನೀಡಿದ್ದಾರೆ. ಇದರಿಂದಾಗಿ ಮೊದಲ ಪ್ರಮುಖ ಸ್ಪರ್ಧೆಯಲ್ಲಿ ನಾನು ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಕ್ಟೋಬರ್ 2019ರಲ್ಲಿ ಲಖನೌದಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್ನಲ್ಲಿ 51.53 ಸೆಕೆಂಡ್ನಲ್ಲಿ ಗುರಿ ತಲುಪಿ ಅಂಜಲಿ ದೇವಿ ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದೇ ವರ್ಷ ದೋಹಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿ, 400 ಮೀ ಓಟದಲ್ಲಿ ಸೆಮಿಫೈನಲ್ಗೆ ಹೋಗುವಲ್ಲಿ ವಿಫಲರಾಗಿದ್ದರು.
ಫೆಬ್ರವರಿಯಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ನ ಎರಡನೇ ಹಂತದಲ್ಲಿ 200 ಮೀ. ಓಟವನ್ನು 23.57 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ ಅಂಜಲಿ ಜಯ ಸಾಧಿಸಿದ್ದರು. ಈ ಓಟದ ನಂತರ, ತೊಡೆಯ ಸ್ನಾಯುಗಳಲ್ಲಿ ನನಗೆ ಸ್ವಲ್ಪ ನೋವು ಉಂಟಾಯಿತು. ಇದು ಮರುದಿನ ತರಬೇತಿಯ ಸಮಯದಲ್ಲಿ ಉಲ್ಬಣಗೊಂಡಿತು. ಆದ್ದರಿಂದ ನಾನು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದೆ. ವೈದ್ಯರು ನನಗೆ ವಿಶ್ರಾಂತಿ ನೀಡಲು ಸೂಚಿಸಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.