ನವದೆಹಲಿ: ಐಪಿಎಲ್ ಹರಾಜಿನಲ್ಲಿ 2 ದಿನಗಳ ಕಾಲ ಕೋಟಿ ಕೋಟಿ ರೂ.ಗಳ ಡೀಲ್ಗಳನ್ನು ನೋಡಿರುವುದರಿಂದ ನಮಗೆ 20 ಲಕ್ಷದ ಒಪ್ಪಂದ ದೊಡ್ಡ ವಿಷಯ ಅನ್ನಿಸುವುದಿಲ್ಲ. ಆದರೆ ಟೆನ್ನಿಸ್ ಬಾಲ್ ಚತುರ ರಮೇಶ್ ಕುಮಾರ್ಗೆ ತಮ್ಮ ತಂದೆ ಚಮ್ಮಾರ ವೃತ್ತಿ ಮಾಡುವುದನ್ನ ಮತ್ತು ತಾಯಿ ಪಂಜಾಬ್ನ ಫಜಿಲ್ಕಾ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಿ ಬಳೆ ಮಾರಾಟ ಮಾಡುವುದನ್ನು ನಿಲ್ಲಿಸುವುದಕ್ಕೆ ತಾವೂ ಪಡೆದ ಅಷ್ಟೇ ಹಣ ಸಾಕು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇನ್ನೂ ಕ್ಲಬ್ ಮಟ್ಟದ ಅಥವಾ ಯಾವುದೇ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲದ ರಮೇಶ್ ಕುಮಾರ್ ಎಡಗೈ ಸ್ಪಿನ್ನರ್ ಆಗಿದ್ದು, ಅವರನ್ನು 'ಜಲಾಲಾಬಾದ್ ನರೈನ್' ಎಂದು ಅವರ ಹಳ್ಳಿಯ ಸುತ್ತಾ ಮುತ್ತ ಜನ ಕರೆಯುತ್ತಾರೆ. ಕೇವಲ 10 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಅವರು ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್ ಮಾಡಿ ಈಗಾಗಲೇ ಯ್ಯೂಟ್ಯೂಬ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡ ನಂತರ ಅವರ ಕಥೆ ಹೆಚ್ಚು ಜನರನ್ನು ತಲುಪಿದೆ.
ಇದನ್ನೂ ಓದಿ:ನಾನು ಎಂಎಸ್ ಧೋನಿಯಂತೆ ಮ್ಯಾಚ್ ಫಿನಿಷ್ ಮಾಡಲು ಇಷ್ಟಪಡುತ್ತೇನೆ: ಸ್ಟೋಯ್ನಿಸ್
"ನನ್ನ ಅಪ್ಪ ಅಮ್ಮ ಇನ್ನು ಮುಂದೆ ಕೆಲಸ ಮಾಡದಿರಲು ಅಂತಿಮವಾಗಿ ಒಪ್ಪಿಕೊಂಡಿದ್ದಾರೆ. ಅವರು ಈ ಕೆಲಸ ಮಾಡಬೇಕೆಂದು ನಾನು ಎಂದಿಗೂ ಬಯಸಲಿಲ್ಲ, ಆದರೆ, ಹೊಟ್ಟೆ ಪಾಡಿಗಾಗಿ ಅನಿವಾರ್ಯವಾಗಿ ಮಾಡಬೇಕಾಗಿತ್ತು" ಎಂದು ರಮೇಶ್ ಪಿಟಿಐಗೆ ತಿಳಿಸಿದ್ದಾರೆ.
ಕೆಕೆಆರ್ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ನನ್ನ ಜೀವನ ಬದಲಾಗುವುದಿಲ್ಲ, ನಾನು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬದಲಾಗುತ್ತದೆ. ನಾನು ಆ ದಾರಿ ಕಾಯುತ್ತಿದ್ದೇನೆ, ಅಂತಿಮವಾಗಿ ನನಗೆ ಅಗತ್ಯವಾದ ವೇದಿಕೆ ಸಿಕ್ಕಿದೆ ಎಂದು ಎಡಗೈ ಸ್ಪಿನ್ನರ್ ಹೇಳಿಕೊಂಡಿದ್ದಾರೆ. ತಾವೂ ಐಪಿಎಲ್ ಒಪ್ಪಂದ ಪಡೆದುಕೊಂಡಾಗಿನಿಂದಲೂ ತಮ್ಮ ಮೊಬೈಲ್ ಸತತವಾಗಿ ರಿಂಗ್ ಆಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
7 ವರ್ಷಗಳ ಕಾಲ ಭಾರತಾದ್ಯಂತ ಟೆನಿಸ್ ಟೂರ್ನಿಮೆಂಟ್ಗಳಲ್ಲಿ ಆಡುತ್ತಿದ್ದ ರಮೇಶ್ ಕಳೆದ ವರ್ಷವಷ್ಟೇ ಲೆದರ್ ಬಾಲ್ ರುಚಿ ಕಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಜಿಲ್ಲಾ ಮಟ್ಟದ ಟೂರ್ನಮೆಂಟ್ನಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದರಿಂದ ಅವರನ್ನು ರಣಜಿ ಕ್ಯಾಂಪ್ಗೆ ಕರೆಸಿಕೊಳ್ಳಲಾಗಿತ್ತು.
ಗುರ್ಕಿರಾತ್ ಮನ್ ನೆರವು: ಸ್ಥಳೀಯ ಟೂರ್ನಮೆಂಟ್ಗಳಲ್ಲಿ ಗಮನ ಸೆಳೆದಿದ್ದ ರಮೇಶ್, ಒಮ್ಮೆ ಪಂಜಾಬ್ ತಂಡದ ಹಿರಿಯ ಆಲ್ರೌಂಡರ್ ಗುರ್ಕಿರಾತ್ ಮನ್ರನ್ನು ಭೇಟಿ ಮಾಡಿ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ನಂತರ ಗುರ್ಕಿರಾರ್, ರಮೇಶ್ ಬೌಲಿಂಗ್ ಮಾಡುವ ಕೆಲವು ವಿಡಿಯೋಗಳನ್ನು ಕೆಕೆಆರ್ ತಂಡದ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಅವರಿಗೆ ಕಳುಹಿಸಿಕೊಟ್ಟಿದ್ದರು.
ಈ ವಿಡಿಯೋವನ್ನು ವೀಕ್ಷಿಸಿದ ನಂತರ ನಾಯರ್ ಮುಂಬೈನಲ್ಲಿ ಕೆಕೆಆರ್ ಟ್ರಯಲ್ಸ್ನಲ್ಲಿ ಭಾಗವಹಿಸಲು ತಿಳಿಸಿದ್ದಾರೆ, ಟ್ರಯಲ್ಸ್ನಲ್ಲಿ ಗಮನಸೆಳೆದಿದ್ದರಿಂದ ಐಪಿಎಲ್ ಹರಾಜಿನಲ್ಲಿ ಕೆಕೆಆರ್ 20 ಲಕ್ಷ ರೂ ಮೂಲಬೆಲೆಗೆ ರಮೇಶ್ ಕುಮಾರ್ರನ್ನು ಖರೀದಿಸಿತು.
ಇದನ್ನೂ ಓದಿ:ಭವಿಷ್ಯದ ತಾರೆ ಚೇತನ್ ಸಕಾರಿಯಾರನ್ನ 4.2 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
ಯಾವುದೇ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಆಡದೇ ಇರುವ ರಮೇಶ್ ಈಗಾಗಲೇ ಐಪಿಎಲ್ ಮೂಲಕ ಬಿಗ್ ಬ್ರೇಕ್ ಪಡೆದುಕೊಂಡಿದ್ದಾರೆ. ತಮಿಳುನಾಡಿನ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿದ್ದ ಟಿ.ನಟರಾಜನ್ ಕೂಡ ಟೆನಿಸ್ ಬಾಲ್ ಕ್ರಿಕೆಟ್ ಮೂಲಕವೇ ಮೊದಲು ಗಮನ ಸೆಳೆದಿದ್ದರು, ನಂತರ ಐಪಿಎಲ್, ರಣಜಿ ಹಾಗೂ ಭಾರತ ತಂಡದಲ್ಲೂ ಅವಕಾಶ ಪಡೆದು ಮಿಂಚಿದ್ದರು, ಇದೀಗ ಅವರ ದಾರಿಯಲ್ಲೆ ರಮೇಶ್ ಕುಮಾರ್ ಸಾಗುತ್ತಿದ್ದಾರೆ.
ನೀವು ಯೂಟ್ಯೂನ್ನಲ್ಲಿ ನನ್ನ ವಿಡಿಯೋ ನೋಡಿ, ನಾನೊಬ್ಬ ಮೂಲತಃ ಟೆನಿಸ್ ಬಾಲ್ ಆಟಗಾರ. ನನ್ನ ಬೌಲಿಂಗ್ನಲ್ಲಿ ಚೆಂಡನ್ನು ಉತ್ತಮವಾಗಿ ತಿರುಗಿಸುವುದರಿಂದ ಸಾಕಷ್ಟು ಜನರು ಲೆದರ್ ಬಾಲ್ನಲ್ಲಿ ಆಡಿ, ದೊಡ್ಡದಾಗಿ ಸಾಧನೆ ಮಾಡಬಹುದು ಎಂದು ಸಲಹೆ ನೀಡುತ್ತಿದ್ದರು. ಆದರೆ, ನನಗೆ ಅಗತ್ಯ ಬೆಂಬಲ ಇರಲಿಲ್ಲ, ವೃತ್ತಿಪರ ಕ್ರಿಕೆಟಿಗನಾಗಿ ಬೆಳೆಯಲು ನನಗೆ ಹಣಕಾಸಿನ ಅಗತ್ಯವಿತ್ತು.
ನಾನು ಕೆಲವೇ ಕೆಲವು ಲೆದರ್ ಬಾಲ್ ಕ್ರಿಕೆಟ್ ಪಂದ್ಯಗಳನ್ನಾಡುತ್ತಿದ್ದೆ, ಆದರೆ, ಹೆಚ್ಚಾಗಿ ಟೆನಿಸ್ ಬಾಲ್ ಟೂರ್ನಮೆಂಟ್ಗಳನ್ನಾಡುತ್ತಿದ್ದೆ. ಪಂಜಾಬ್ನಾದ್ಯಂತ ನಾನು ಟೆನಿಸ್ ಟೂರ್ನಮೆಂಟ್ಗಳಲ್ಲಿ ಆಡುತ್ತಿದ್ದೆ, ನಾನು ಉತ್ತಮವಾಗಿ ಆಡಿದಾಗಲೆಲ್ಲಾ ಬೇರೆ ರಾಜ್ಯಗಳಿಂದಲೂ ಕರೆ ಬರುತ್ತಿತ್ತು. ನಾನು ನಿತ್ಯ 500ರೂ, ಕೆಲವೊಮ್ಮೆ 1000 ರೂ ಗಳಿಸುತ್ತಿದ್ದೆ. ಈ ಹಣದಿಂದ ನಾನು ಮನೆ ಮತ್ತು ಪ್ರಯಾಣದ ವೆಚ್ಚವನ್ನು ಬರಿಸುತ್ತಿದ್ದೆ ಎಂದು ರಮೇಶ್ ತಿಳಿಸಿದ್ದಾರೆ.
ತಾವೂ ವೃತ್ತಿಪರ ಕ್ರಿಕೆಟ್ನಲ್ಲಿ ತುಂಬಾ ದೂರ ಸಾಗಬೇಕು ಎಂಬುದನ್ನು ಅರಿತುಕೊಂಡಿರುವ ರಮೇಶ್, ತಮ್ಮ ಕೌಶಲ್ಯ ಮತ್ತು ಫಿಟ್ನೆಸ್ನಲ್ಲಿ ಸಾಕಷ್ಟು ಸುಧಾರಿಸಬೇಕು ಎಂದಿದ್ದು, ಐಪಿಎಲ್ ತಮ್ಮ ಆಟವನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ನೆರವಾಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.
ಇದನ್ನೂ ಓದಿ:ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!