ಕ್ರಿಕೆಟ್ ಹಲವು ವರ್ಷಗಳಿಂದ ಹಲವಾರು ಕುತೂಹಲಕಾರಿ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದೆ. ಚುಟುಕು ಕ್ರಿಕೆಟ್ ಬಂದ ನಂತರವಂತೂ ಉತ್ಸಾಹದ ಮಟ್ಟ ಹೆಚ್ಚಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಪರಿಚಯದ ನಂತರ ಭಾರತದಲ್ಲಿ ಕ್ರಿಕೆಟ್ ಮತ್ತಷ್ಟು ಅಭಿನಮಾನಿಗಳನ್ನು ಹೆಚ್ಚಿಸಿಕೊಂಡಿತು. ವಿದೇಶಿ ಆಟಗಾರರು ಭಾರತೀಯ ಅಭಿಮಾನಿಗಳಿಗೆ ಹತ್ತಿರವಾದರು.
ಆಟಗಾರರ ಮೇಲಿನ ಕುತೂಹಲ ಮತ್ತು ಉತ್ಸಾಹ ಕೆಲವೊಮ್ಮೆ ತಪ್ಪುಗಳನ್ನೂ ಮಾಡಿಸುತ್ತದೆ. ಹೌದು. ಇತ್ತೀಚೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರಿಗೆ ಸೇರಿದ ಕೆಲವು ವಸ್ತುಗಳು ಮತ್ತು ಕ್ರಿಕೆಟ್ನಲ್ಲಿ ಬಳಸುವ ಉಪಕರಣಗಳು ಕಾಣೆಯಾಗಿದ್ದವು. ಮುಖ್ಯವಾಗಿ ಡೆಲ್ಲಿಯ ನಾಯಕ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಕೆಲವು ಬ್ಯಾಟ್ಗಳು ಮತ್ತು ಇತರ ಕ್ರಿಕೆಟ್ನ ವಸ್ತುಗಳನ್ನು ಕಳೆದುಕೊಂಡಿದ್ದರು.

ಕಳ್ಳತನದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಲಾಜಿಸ್ಟಿಕ್ಸ್ ಕಂಪನಿ ಬೆಂಗಳೂರಿನಲ್ಲಿ ದೂರು ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಪೊಲೀಸರ ಸಹಾಯ ಕೋರಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಮತ್ತು ಇತರೆ ಆಟದ ಸಾಮಗ್ರಿಗಳನ್ನು ಸಾಗಿಸಲು ಲಾಜಿಸ್ಟಿಕ್ಸ್ ಸಂಸ್ಥೆಯೊಂದರ ಸೇವೆ ಪಡೆಯಲಾಗಿತ್ತು. ಬೆಂಗಳೂರಿನಿಂದ ಸಾಗಿಸುವಾಗ ಸುಮಾರು 16 ಲಕ್ಷ ರೂ ಮೌಲ್ಯದ ಸರಕುಗಳು ಕಾಣೆಯಾಗಿದ್ದವು ಎಂದು ವರದಿಯಾಗಿತ್ತು.
ಇದನ್ನೂ ಓದಿ: Twitter blue tick: ಘಟಾನುಘಟಿ ಕ್ರಿಕೆಟಿಗರ ಟ್ವಿಟರ್ ಬ್ಲೂ ಟಿಕ್ ಮಾಯ!
ಕಾಣೆಯಾದ ವಸ್ತುಗಳು ಮರಳಿ ದೊರೆತಿದೆ ಎಂದು ಸಂಸ್ಥೆ ತಿಳಿಸಿದೆ. ಪೊಲೀಸರು ದೂರಿನನ್ವಯ ಕಳ್ಳರನ್ನು ಪತ್ತೆ ಹಚ್ಚಿದ್ದು, ವಸ್ತುಗಳನ್ನು ಮರಳಿ ತಂಡಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಸ್ತುಗಳು ಸಿಕ್ಕಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ದೊರೆತ ಅವರ ವಸ್ತುಗಳ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಕಳ್ಳರನ್ನು ಹಿಡಿದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. "ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚಿದ್ದಾರೆ. ಕೆಲವು ವಸ್ತುಗಳನ್ನು ಕಳೆದುಕೊಂಡಿದ್ದೆವು. ಆದರೆ ಇಷ್ಟನ್ನು ಹುಡುಕಿಕೊಟ್ಟಿದ್ದಕ್ಕೆ ಧನ್ಯವಾದಗಳು" ಎಂದು ಬರೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆವೃತ್ತಿಯಲ್ಲಿ ಸತತ ಸೋಲಿನ ನಂತರ ಗುರುವಾರ (ಏ.20) ನಡೆದ ಪಂದ್ಯದಲ್ಲಿ ತವರು ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ನಾಲ್ಕು ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ 6ನೇ ಪಂದ್ಯದಲ್ಲಿ ಮೊದಲ ಗೆಲುವಿನ ಸವಿ ಕಂಡಿದೆ. 6 ಪಂದ್ಯಗಳಲ್ಲಿ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಅಮೂಲ್ಯ ಅರ್ಧಶತಕ ದಾಖಲಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: IPL 2023: ಇದು ನನ್ನ ಮೊದಲ ಟೆಸ್ಟ್ ಗೆದ್ದಂತೆ - ಸೌರವ್ ಗಂಗೂಲಿ