ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ತಮ್ಮ 4ನೇ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಅನಿವೃದ್ಧ್ ಜೋಶಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಎ ಗುಂಪಿನ್ ಪಂದ್ಯದಲ್ಲಿ ರೈಲ್ವೇಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ಗಳಿಸಿತ್ತು. ಶಿವಂ ಚೌದರಿ 48 ಹಾಗೂ ಪ್ರತಾಪ್ ಸಿಂಗ್ 41 ಹಾಗೂ ಹರ್ಷ್ ತ್ಯಾಗಿ 33 ರನ್ಗಳಿಸಿದ್ದರು.
ಕರ್ನಾಟಕ ತಂಡದ ಪರ ಪ್ರಸಿದ್ ಕೃಷ್ಣ 2, ಶ್ರೇಯಸ್ ಗೋಪಾಲ್ 2 ಹಾಗೂ ವಿ. ಕೌಶಿಕ್ ಒಂದು ವಿಕೆಟ್ ಪಡೆದರು. ಇನ್ನು 153 ರನ್ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ 19.4 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಟೂರ್ನಿಯಲ್ಲಿ 3ನೇ ಜಯ ಸಾಧಿಸಿತು.
ಅನಿವೃದ್ಧ್ ಜೋಶಿ 40 ಎಸೆತಗಳಲ್ಲಿ 4 ಸಿಕ್ಸರ್ 3 ಬೌಂಡರಿ ಸಹಿತ ಅಜೇಯ 64 ರನ್ಗಳಿಸಿ ಗೆಲುವಿನ ರೂವಾರಿಯಾದರು. ದೇವದತ್ ಪಡಿಕ್ಕಲ್ 37 ರನ್ಗಳಿಸಿ ಸೂಕ್ತ ಬೆಂಬಲ ನೀಡಿದರು. ಆದರೆ, ನಾಯಕ ಕರುಣ್ ನಾಯರ್(14), ಶ್ರೀಜಿತ್ ರೋಹನ್ (14) ಸೇರಿದಂತೆ ಪ್ರಮುಖ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರಿಂದ ಪಂದ್ಯ ಕೊನೆಯ ಓವರ್ವರೆಗೆ ಹೋಗಬೇಕಾಯಿತು.
ಈ ಗೆಲುವು ಸೇರಿದಂತೆ ಕರ್ನಾಟಕ ತಂಡ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ ಒಂದು ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಪಂಜಾಬ್ ತಂಡ 4 ಗೆಲುವಿನೊಂದಿಗೆ 16 ಅಂಕ ಮತ್ತು ಅತ್ಯುತ್ತಮ ರನ್ರೇಟ್ ಹೊಂದಿರುವುದರಿಂದ ಎ ಗುಂಪಿನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ.
ಇದನ್ನು ಓದಿ:ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ: ಮುಷ್ತಾಕ್ ಅಲಿ ಟೂರ್ನಿ ತೊರೆದ ಕೃನಾಲ್