ಮುಂಬೈ: ವಿಶ್ವದ 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಆತಂಕ ಸೃಷ್ಟಿಸಿದೆ. ಈಗಾಗಲೇ ಜಪಾನ್ನ ಟೋಕಿಯೋದ ಒಲಿಂಪಿಕ್ಸ್ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಹೀಗಾಗಿ ಪೂರ್ವಭಾವಿ ಕಾರ್ಯಕ್ರಮಗಳು ಬಹುತೇಕ ರದ್ದಾಗಿವೆ. ಇನ್ನು ಇದೇ ತಿಂಗಳ 29ರಿಂದ ಆರಂಭವಾಗಲಿರುವ ದೇಶದ ಶ್ರೀಮಂತ ಐಪಿಎಲ್ ಟೂರ್ನಿ ಮೇಲೂ ಕೊರೊನಾ ಕೆಂಗಣ್ಣು ಬಿದ್ದಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 14ರಂದು ಮುಂಬೈನಲ್ಲಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನ ಮಹತ್ವದ ಸಭೆ ನಡೆಯಲಿದೆ. ಐಪಿಎಲ್ ಟೂರ್ನಿ ನಿಗದಿಯಂತೆ ಆರಂಭಿಸುವುದೋ ಅಥವಾ ಬೇಡವೋ ಎಂಬ ಬಗ್ಗೆ ಈ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಬಾಸ್ ಸೌರವ್ ಗಂಗೂಲಿ, ಯಾವುದೇ ಕಾರಣಕ್ಕೂ ಐಪಿಎಲ್ ಮುಂದೂಡಿಕೆ ಮಾಡಲ್ಲ. ಈಗಾಗಲೇ ನಿಗದಿ ಮಾಡಿರುವ ವೇಳಾಪಟ್ಟಿಯಂತೆ ಟೂರ್ನಿ ನಡೆಯಲಿದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಹರಡಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಬಿಸಿಸಿಐ ಕೂಡಾ ಇದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 29ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಏಪ್ರಿಲ್ 15ರವರೆಗೆ ಐಪಿಎಲ್ನಲ್ಲಿ ಭಾಗಿಯಾಗಲ್ಲ ವಿದೇಶಿ ಪ್ಲೇಯರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿದೇಶಿ ಪ್ಲೇಯರ್ಸ್ ಭಾಗಿಯಾಗಬೇಕಾಗಿದೆ. ಆದರೆ ಈಗಾಗಲೇ ಕೇಂದ್ರ ಸರ್ಕಾರ ವಿದೇಶಿಗರ ವೀಸಾ ಮೇಲೆ ಏಪ್ರಿಲ್ 15ರವರೆಗೆ ನಿರ್ಬಧ ಹೇರಿರುವ ಕಾರಣ ಅವರು ಭಾರತಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ವಿದೇಶಿ ಆಟಗಾರರಿಲ್ಲದೆ ಕೆಲವೊಂದು ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.
ಕ್ರೀಡಾಭಿಮಾನಿಗಳಿಲ್ಲದೇ ಐಪಿಎಲ್!?
ಮುಂಬೈನಲ್ಲಿ ಮೊದಲ ಪಂದ್ಯ ನಡೆಯಬೇಕಾಗಿರುವ ಕಾರಣ ಮಹಾರಾಷ್ಟ್ರ ಸರ್ಕಾರ, ಮೈದಾನದಲ್ಲಿ ಕ್ರೀಡಾಭಿಮಾನಿಗಳಿಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಅನುಮತಿ ನೀಡಲು ನಿರ್ಧಾರ ತೆಗೆದುಕೊಂಡಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿದ್ದು, ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿನ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.