ನವದೆಹಲಿ: ನವೆಂಬರ್ 3ರಂದು ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶದ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಬಾಂಗ್ಲಾ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದೆ. ಇದರ ಮಧ್ಯೆ ಮೊದಲ ಟಿ-20 ಪಂದ್ಯ ನಡೆಯುವುದು ಸಂಶಯ ಎಂದು ಹೇಳಲಾಗುತ್ತಿದೆ.
ನವದೆಹಲಿಯಲ್ಲಿ ವಾಯು ಗುಣಮಟ್ಟ ಸಂಪೂರ್ಣವಾಗಿ ಕೆಟ್ಟು ಹೋಗಿರುವ ಕಾರಣ, ಈಗಾಗಲೇ ಮೈದಾನದಲ್ಲಿ ಬಾಂಗ್ಲಾ ಆಟಗಾರರು ಮುಖಗಳಿಗೆ ಮಾಸ್ಕ್ ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆದರೆ ಆಟಗಾರರ ಜೊತೆ ಪ್ರೇಕ್ಷಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಈ ಪಂದ್ಯ ಸ್ಥಳಾಂತರ ಅಥವಾ ರದ್ಧು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೇ ವಿಷಯವಾಗಿ ಮಾತನಾಡಿದ್ದು, ಈಗಾಗಲೇ ನಿಗದಿಯಾದಂತೆ ಇದೇ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎಂದಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನವೆಂಬರ್ 3ರರೊಳಗೆ ವಾಯುಮಾಲಿನ್ಯ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದು, ದೆಹಲಿಯ ಗಾಳಿಯ ಗುಣಮಟ್ಟ ನಿಯಂತ್ರಣಕ್ಕೆ ಬರುವವರೆಗೂ ಮೈದಾನದಲ್ಲಿ ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂದಿದ್ದಾರೆ.
ಈ ಕುರಿತು ಮಾತಿಗೆ ಸಿಕ್ಕ ಬಾಂಗ್ಲಾ ಕ್ರಿಕೆಟಿಗ ಲಿಟನ್ ದಾಸ್, ನನಗೆ ವೈಯಕ್ತಿಕ ಆರೋಗ್ಯ ಸಮಸ್ಯೆಗಳಿವೆ. ಹಾಗಾಗಿ ನಾನು ಮಾಸ್ಕ್ ಧರಿಸಿ ಅಂಗಣಕ್ಕೆ ಇಳಿದಿದ್ದೇನೆ ಎಂದು ಹೇಳಿದ್ರು.
2017ರಲ್ಲೂ ಈ ಮೈದಾನದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವವಾಗಿತ್ತು. ಆ ಸಂದರ್ಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಮುಖಗವಸು ಧರಿಸಿ ಕ್ರೀಡಾಂಗಣಕ್ಕಿಳಿದಿದ್ದರು.