'ಮುಂಗಾರು ಮಳೆ' ಚಿತ್ರದ ನಂತರ ಖ್ಯಾತಿಯ ಉತ್ತುಂಗಕ್ಕೆ ಏರಿದ ನಿರ್ದೇಶಕ ಯೋಗರಾಜ್ ಭಟ್ ಈಗ ಮತ್ತೊಂದು ದೊಡ್ಡ ಸಿನಿಮಾ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ 'ಗಾಳಿಪಟ-2' ಚಿತ್ರದಲ್ಲಿ ಭಟ್ಟರು ಬ್ಯುಸಿ ಇದ್ದು ಈ ಚಿತ್ರದ ನಂತರ ಮಲ್ಟಿಸ್ಟಾರ್ಗಳ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಎಂದರೆ ಈ ಚಿತ್ರದಲ್ಲಿ ಕನ್ನಡ ಸ್ಟಾರ್ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಹಾಗೂ ತಮಿಳು ಖ್ಯಾತ ನಟ, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಉಪೇಂದ್ರ ಹಾಗೂ ಪ್ರಭುದೇವ ಜೊತೆಯಾಗಿ ನಟಿಸಿದ್ದ ಹೆಚ್ಟುಒ ಸಿನಿಮಾ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಈಗ ಶಿವಣ್ಣ ಹಾಗೂ ಪ್ರಭುದೇವ ಸೇರಿದರೆ ಮತ್ತೆ ಇದು ಹಿಟ್ ಸಿನಿಮಾವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಗಾಂಧಿನಗರ ಸಿನಿಪಂಡಿತರ ಮಾತು.
ಯೋಗರಾಜ್ ಭಟ್ ಈಗಾಗಲೇ ಪ್ರಭುದೇವ ಹಾಗೂ ಶಿವರಾಜ್ಕುಮಾರ್ ಜೊತೆ ಮಾತನಾಡಿದ್ದು ಶಿವಣ್ಣ ಒಕೆ ಎಂದಿದ್ದಾರಂತೆ. ಪ್ರಭುದೇವ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಲ್ಲಿ ಶೀಘ್ರವೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಮಲ್ಟಿಸ್ಟಾರರ್ ಸಿನಿಮಾಗೆ 'ಬೆಲ್ಬಾಟಮ್ ' ಚಿತ್ರಕ್ಕೆ ಕಥೆ ಬರೆದ ದಯಾನಂದ ಟಿ.ಕೆ ಜೊತೆಯಾಗಿದ್ದಾರಂತೆ. ಶಿವರಾಜ್ಕುಮಾರ್ ಈಗ ಭಜರಂಗಿ 2, ಆರ್ಡಿಎಕ್ಸ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪ್ರಭುದೇವ ರಾಧೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ನಂತರ ಬಹುಶ: ಯೋಗರಾಜ್ ಭಟ್ ಸಿನಿಮಾ ಆರಂಭವಾಗುವ ಸಾಧ್ಯತೆ ಇದೆ.